• ಧಾರವಾಡ ಹಾವೇರಿ ಪೇಟೆಯಲ್ಲಿ ಗ್ರಾಮದೇವಿಯರ ಜಾತ್ರೆ
• 30 ವರ್ಷಗಳ ನಂತರ ಸಂಭ್ರಮದ ಮಹೋತ್ಸವ
• ಕಣ್ಮನ ಸೆಳೆದ ಭಂಡಾರ ಎರಚುವ ಹೊನ್ನಾಟ
• ಸಾವಿರಾರು ಭಕ್ತರಿಂದ ದೇವಿಯರಿಗೆ ವಿಶೇಷ ಪೂಜೆ

ಗ್ರಾಮೀಣ ಸಂಸ್ಕೃತಿ, ಭಕ್ತಿ ಮತ್ತು ಸಾಮರಸ್ಯ ಸಂಕೇತವಾಗಿ ಧಾರವಾಡ ಹಾವೇರಿ ಪೇಟೆಯಲ್ಲಿ ದ್ಯಾಮವ್ವ ಹಾಗೂ ದುರ್ಗಮ್ಮ ತಾಯಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ.

ಭಕ್ತರು ಒಬ್ಬರ ಮೇಲೆ ಒಬ್ಬರು ಭಂಡಾರವನ್ನು ಎರಚುತ್ತಾ ಉದೋ ಉದೋ ಎಂಬ ಜಯಘೋಷಗಳೊಂದಿಗೆ ಸಂಭ್ರಮಿಸಿದರು. ಡೊಳ್ಳು ಕುಣಿತ, ಕರಡಿ ಮಜಲು, ಜಗ್ಗಲಗಿ ಮತ್ತು ಮಹಿಳೆಯರ ಕೋಲಾಟದ ಜಾನಪದ ಸೋಗಡಿನೊಂದಿಗೆ ಗ್ರಾಮ ದೇವಿಯರ ಮೂರ್ತಿ ಮೆರವಣಿಗೆ ಹಾಗೂ ಭಂಡಾರ ಎರಚುವ ಹೋನ್ನಾಟ ಭಕ್ತಾದಿಗಳ ಹರ್ಷೋದ್ಗಾರಕ್ಕೆ ಸಾಕ್ಷಿಯಾಗಿತ್ತು. ಜತೆಗೆ 30 ವರ್ಷಗಳ ನಂತರ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಧಾರವಾಡ ಹಾವೇರಿ ಪೇಟೆ, ಮೃತ್ಯುಂಜಯ ನಗರ, ಮುರುಘಾಮಠ, ರಾಜನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ದೇವಿಯ ಜಾತ್ರೆಯ ಹಬ್ಬದ ವಾತಾವರಣ ಎಲ್ಲರ ಗಮನ ಸೆಳೆಯುತ್ತಿದೆ. ಭಯ ಭಕ್ತಿ ಭಾವದಿಂದ ಸಾವಿರಾರು ಭಕ್ತರು ಹೋನ್ನಾಟದಲ್ಲಿ ಭಾಗವಹಿಸಿ, ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸೇವೆ ಸಮರ್ಪಿಸಿದರು.
