ಅಥಣಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚಹಾ ಅಂಗಡಿಗೆ ನುಗ್ಗಿ ಅಪಘಾತ ಸಂಭವಿಸಿದೆ.

ಗುರುವಾರ ಮಧ್ಯಾಹ್ನ ಸುಮಾರು 12:00 ಗಂಟೆಗೆ ಈ ಘಟನೆ ನಡೆದಿದೆ. ಅಥಣಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಚಹಾ ಅಂಗಡಿಯ ಮೇಲೆ ಹರಿದ ಪರಿಣಾಮ, ಅಂಗಡಿಯು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸುದೈವದಿಂದ ಅಂಗಡಿಯಲ್ಲಿದ್ದ ಮೂವರು ಯುವಕರು ತಕ್ಷಣವೇ ಅಲ್ಲಿಂದ ಓಡಿ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಂಗಡಿ ಮಾಲಿಕ ಪ್ರಶಾಂತ ನಲವಡೆ ಜರುಗಿದ ಘಟನೆಯ ಬಗ್ಗೆ ವಿವರಿಸುತ್ತಾ, ತಾವು ಹೇಗೆ ಪ್ರಾಣಾಪಾಯದಿಂದ ಪಾರಾದೆವು ಎಂಬ ಭೀಕರ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೆ ಅಂಗಡಿಯ ಫ್ರಿಜ್ ಹಾಗೂ ವಿವಿಧ ಸಾಮಗ್ರಿ ಸೇರಿದಂತೆ ಸುಮಾರು 5 ಲಕ್ಷ ರೂಪಾಯಿಯಷ್ಟು ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಬಸ್ ಚಾಲಕ ಸಂತೋಷ್ ಹಳ್ಳಿ ಘಟನೆ ಬಗ್ಗೆ ಪ್ರತಿಕ್ರಿಯಿಸಿ, “ನಡೆದ ಘಟನೆ ಬಗ್ಗೆ ನನಗೆ ಏನೂ ತಿಳಿಯದಂತಾಗಿದೆ. ಆ ಕ್ಷಣದಲ್ಲಿ ನನಗೆ ಪ್ರಜ್ಞೆ ತಪ್ಪಿದಂತಾಗಿತ್ತು. ನಿಯಂತ್ರಣ ತಪ್ಪಿದ್ದರಿಂದಲೇ ಈ ಘಟನೆ ಸಂಭವಿಸಿದೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಅಪಘಾತದಲ್ಲಿ ಬಸ್ಸಿನ ಮುಂಭಾಗದ ಗಾಜು ಒಡೆದು ಪುಡಿಪುಡಿಯಾಗಿದೆ. ಮೂವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಅವರು ಸ್ಥಳದಿಂದ ಚಿಕಿತ್ಸೆಗಾಗಿ ತೆರಳಿದ್ದಾರೆ. ಬೆಳಗಾವಿ-ಕಾಗವಾಡ ಮಾರ್ಗವು ಎರಡು ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಸಾವಿರಾರು ವಾಹನಗಳು ಸಂಚರಿಸುತ್ತವೆ. ಆಕಸ್ಮಿಕವಾಗಿ ನಡೆದ ಈ ಘಟನೆಯನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
