Chikkodi

ಕಬ್ಬಿನ ಬೆಳೆಗೆ ಬೆಂಕಿ: 10 ಲಕ್ಷಕ್ಕೂ ಹೆಚ್ಚು ನಷ್ಟ; ಅಧಿಕಾರಿಗಳ ಭೇಟಿಗೆ ಆಗ್ರಹಿಸಿ ರೈತರ ಆಕ್ರೋಶ

Share

ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ರೈತ ಲಗಮಣ್ಣ ಮಹಾಲಿಂಗ ಬಡಕುಂದ್ರಿ ಎಂಬುವರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದೆ.

ಗ್ರಾಮದ ರೈತ ಲಗಮಣ್ಣ ಅವರು ಕಷ್ಟಪಟ್ಟು ಬೆಳೆಸಿದ್ದ ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಕಬ್ಬಿನ ಬೆಳೆ ಕಣ್ಣೆದುರೇ ಸುಟ್ಟು ಭಸ್ಮವಾಗಿದೆ. ವಿದ್ಯುತ್ ತಂತಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಇಡೀ ಜಮೀನಿಗೆ ವ್ಯಾಪಿಸಿದೆ. ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗಿರುವುದನ್ನು ಕಂಡು ಅನ್ನದಾತರು ತೀವ್ರ ಕಂಗಾಲಾಗಿದ್ದಾರೆ.

ಘಟನೆ ನಡೆದು ಇಷ್ಟೊಂದು ದೊಡ್ಡ ಮಟ್ಟದ ನಷ್ಟ ಸಂಭವಿಸಿದ್ದರೂ, ಸಂಬಂಧಪಟ್ಟ ಹೆಸ್ಕಾಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದುವರೆಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಗ್ರಾಮಸ್ಥರು ಮತ್ತು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:

error: Content is protected !!