ಆರ್ಥಿಕ ಕ್ಷೇತ್ರದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಸದಸ್ಯರು ಪಾರದರ್ಶಕ ಸೇವೆ ನೀಡಿದಾಗ ಮಾತ್ರ ಸಂಸ್ಥೆಯ ಪ್ರಗತಿ ಸಾಧ್ಯ. ಜಿನ್ನಪ್ಪಾ ಚೌಗುಲೆ ಲಾಲ್ ಬಹದ್ದೂರ್ ಸಹಕಾರಿ ಸಂಸ್ಥೆಯು ಸದಸ್ಯರ ಸಮಸ್ಯೆಗಳನ್ನು ಆಲಿಸಿ ಉತ್ತಮ ಆಡಳಿತ ನೀಡುತ್ತಿರುವುದರಿಂದ ಈ ವರ್ಷ ₹2.19 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ಹೇಳಿದರು.

ರವಿವಾರ ಹರಿಹಂತ ಶಿಕ್ಷಣ ಸಂಸ್ಥೆಯ ಶ್ರೀ ಜಿನ್ನಪ್ಪಾ ಚೌಗುಲೆ ಲಾಲ್ ಬಹದ್ದೂರ್ ಕ್ರೆಡಿಟ್ ಸಂಸ್ಥೆಯ ಸಭಾಭವನದಲ್ಲಿ ನಡೆದ 37ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಸುರೇಶ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಜಿನ್ನಪ್ಪಣ್ಣಾ ಚೌಗುಲೆ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಅವರ ಒಟ್ಟು ಸೇವೆಯನ್ನು ಪರಿಗಣಿಸಿ ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಿವಂಗತ ಜಿನ್ನಪ್ಪಣ್ಣ ಅವರ ಬಳಿಕ ಅವರ ಸುಪುತ್ರ ಭಮ್ಮಣ್ಣಾ ಚೌಗುಲೆ ಅವರು ಉತ್ತಮ ಆಡಳಿತ ನೀಡುತ್ತಾ ಸಂಸ್ಥೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
ಸಹಕಾರಿ ಸಂಸ್ಥೆಯ ಸಿಇಒ ವಿದ್ಯಾಧರ ಚೌಗುಲೆ ಅವರು ವರದಿ ವಾಚನ ಮಾಡಿದರು. ಸಂಸ್ಥೆಯು 12 ಶಾಖೆಗಳನ್ನು ಹೊಂದಿದ್ದು, 4,661 ಸದಸ್ಯರನ್ನು ಹೊಂದಿದೆ. ₹166.77 ಕೋಟಿ ಠೇವಣಿ ಸಂಗ್ರಹಿಸಿದ್ದು, ₹93.13 ಕೋಟಿ ಸಾಲ ವಿತರಿಸಿದೆ. ₹2.19 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸದಸ್ಯರಿಗೆ ₹1 ಲಕ್ಷದವರೆಗೆ ಅಪಘಾತ ವಿಮೆ ಸೌಲಭ್ಯ ನೀಡಲಾಗುತ್ತಿದೆ. ಬಡ್ಡಿ ರಿಯಾಯಿತಿಯಲ್ಲಿ ಶೇ.1ರಿಂದ 2ರ ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಉಚಿತ ನೇತ್ರ ತಪಾಸಣಾ ಸೌಲಭ್ಯ ಕಲ್ಪಿಸಲಾಗಿದೆ. ಸದಸ್ಯರ ನಿಧನದ ಬಳಿಕ ಮರಣೋತ್ತರ ನಿಧಿಯಾಗಿ ₹2,000 ನೀಡಲಾಗುತ್ತಿದೆ. ನೇತ್ರ ಚಿಕಿತ್ಸೆಗೆ ₹3,000 ಹಾಗೂ ಹೃದಯ ಚಿಕಿತ್ಸೆಗೆ ₹5,000 ಪ್ರತಿಯೊಬ್ಬ ಸದಸ್ಯರಿಗೆ ನೀಡುವ ವ್ಯವಸ್ಥೆ ಸಂಸ್ಥೆಯಲ್ಲಿ ಇದೆ ಎಂದು ಸಿಇಒ ವಿದ್ಯಾಧರ ಚೌಗುಲೆ ಮಾಹಿತಿ ನೀಡಿದರು.
ಪ್ರಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ವಾರ್ಷಿಕ ಸಭೆಗೆ ಚಾಲನೆ ನೀಡಲಾಯಿತು.
ಸಭೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಅಪ್ಪಾಸಾಬ್ ಶಿರಗುಪ್ಪೆ, ನಿರ್ದೇಶಕರಾದ ಬಾವುಸಾಬ್ ಕುರೊಂದುವಾಡೆ, ತಾತ್ಯಾಸಾಹೇಬ್ ಚೌಗುಲೆ, ಸುರೇಶ್ ಚೌಗುಲೆ, ಶ್ರೀಮತಿ ವೀಣಾ ಶುಭಾಷ್ ಕಾತ್ರಾಳೆ, ಮಹಾವೀರ್ ಅಕಿವಾಟೆ, ನೇಮಣ್ಣಾ ತೇರದಾಳೆ, ಶಂಕರ್ ಸವದಿ, ಬಾಹುಬಲಿ ಭೂಲೆ, ಅನ್ನಾಸಾಬ್ ಚಂದುರೆ, ಯಲ್ಲಪ್ಪಾ ಕಾಂಬಳೆ, ಶ್ರೀಮತಿ ಶಾಲನ್ ಪಾಟೀಲ್, ಶ್ರೀಮತಿ ಮಹಾದೇವಿ ಪಾಟೀಲ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.
ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
