ಚಿಕ್ಕೋಡಿ:ನೇಪಾಳಕ್ಕೆ ಪ್ರವಾಸ ಕೈಗೊಂಡಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ 21 ಜನರ ಪ್ರವಾಸಿಗರ ತಂಡವು ದಿಢೀರ್ ಪ್ರವಾಹ ಹಾಗೂ ಹವಾಮಾನ ವೈಪರೀತ್ಯದ ಕಾರಣದಿಂದ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಸುರಕ್ಷಿತವಾಗಿ ಮರಳಿದೆ.

ಎಲ್ಐಸಿ (LIC) ಸಂಸ್ಥೆಯ ವತಿಯಿಂದ ನಿಪ್ಪಾಣಿ ನಗರ ಹಾಗೂ ಸುತ್ತಮುತ್ತಲಿನ ವಿಮಾ ಪ್ರತಿನಿಧಿಗಳು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ಈ ನೇಪಾಳ ಪ್ರವಾಸವನ್ನು ಆಯೋಜಿಸಲಾಗಿತ್ತು. ಆಗಸ್ಟ್ 20ರಂದು ಪ್ರಯಾಣ ಆರಂಭಿಸಿದ್ದ ಈ ತಂಡವು ಕಾಶಿ, ಅಯೋಧ್ಯೆ, ಗೋರಖ್ಪುರ ಹಾಗೂ ಮುಕ್ತಿನಾಥ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆದು ನೇಪಾಳದತ್ತ ತೆರಳಿತ್ತು.
ಪ್ರವಾಸಿಗರು ಲುಂಬಿನಿಗೆ ಭೇಟಿ ನೀಡಿ, ಅಲ್ಲಿಂದ ಕಾಠ್ಮಂಡುವಿನತ್ತ ಪ್ರಯಾಣಿಸುತ್ತಿದ್ದ ವೇಳೆ ಹಠಾತ್ತಾಗಿ ಉಂಟಾದ ಪ್ರವಾಹ ಮತ್ತು ಬಿಕ್ಕಟ್ಟಿನ ಹವಾಮಾನ ಪರಿಸ್ಥಿತಿಯಿಂದಾಗಿ ಮುಂದೆ ಸಾಗಲಾಗದೆ ಪ್ರವಾಸ ರದ್ದುಗೊಳಿಸಲು ನಿರ್ಧರಿಸಿದರು.
ಯಾವುದೇ ಅನಾಹುತವಿಲ್ಲದೆ ಪ್ರವಾಸಿಗರೆಲ್ಲರೂ ಭಾರತದ ಗಡಿಯನ್ನು ತಲುಪಿದ್ದು, ಸುರಕ್ಷಿತವಾಗಿದ್ದಾರೆ. ಪ್ರಸ್ತುತ ತಾಯ್ನಾಡಿನತ್ತ ಪ್ರಯಾಣ ಬೆಳೆಸಿರುವ ತಂಡವು ಸೋಮವಾರದ ವೇಳೆಗೆ ನಿಪ್ಪಾಣಿ ನಗರಕ್ಕೆ ಬಂದು ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರವಾಸಿಗರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
