ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಲ್ಲಿ ಒಂದಾದ ರಾಧಾನಗರಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.ಜಲಾಶಯದ ಸಾಮರ್ಥ್ಯ ಮೀರಿದ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದಲೇ ನದಿಗೆ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.


ರಾಧಾನಗರಿ ಜಲಾಶಯದ ಗೇಟ್ ಸಂಖ್ಯೆ 6ರ ಮೂಲಕ 1,400 ಕ್ಯೂಸೆಕ್ಸ್ ಹಾಗೂ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 1,400 ಕ್ಯೂಸೆಕ್ಸ್ ಸೇರಿದಂತೆ, ಒಟ್ಟು 2,800 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕುಗಳಲ್ಲಿ ಹರಿಯುವ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ.ಇಂದಿನ ವರದಿಯಂತೆ ಈ ನದಿಗಳಲ್ಲಿ ನೀರಿನ ಮಟ್ಟ ಸುಮಾರು 2 ಅಡಿಯಷ್ಟು ಏರಿಕೆಯಾಗಿದೆ.
ನದಿಗೆ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಕಲ್ಲೋಳ ಬ್ಯಾರೇಜ್ ಬಳಿ ಬರೋಬ್ಬರಿ 92,000 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ. ನದಿಗಳ ನೀರಿನ ಮಟ್ಟ ದಿಢೀರ್ ಹೆಚ್ಚಾಗುವು ಸಾಧ್ಯತೆ ಇದೆ.
