Dharwad

ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ

Share

ರಾಜ್ಯದಲ್ಲಿ ಮುಂಗಾರು ಸಂಪೂರ್ಣ ಕೈಕೊಟ್ಟು, ಬಿತ್ತನೆ ಕುಂಠಿತವಾಗಿ ಅನ್ನದಾತರು ಕಂಗಾಲಾಗಿದ್ದರೂ ಕೂಡಾ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ಸಂಪೂರ್ಣವಾಗಿ ನುಣುಚಿಕೊಳ್ಳುತ್ತಿದೆ. ಕೃಷಿ ಸಚಿವರೇ ಇಲ್ಲದ ಅನಾಥ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಗಳು, ಈಗ ತಮ್ಮ ಆಡಳಿತಾತ್ಮಕ ವೈಫಲ್ಯ ಮುಚ್ಚಿಕೊಳ್ಳಲು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಕೇಂದ್ರದತ್ತ ಬೆರಳು ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ರಾಜ್ಯ ಸರ್ಕಾರ ತನ್ನ ಮಟ್ಟದಲ್ಲಿ ರೈತರಿಗೆ ತುರ್ತು ಪರಿಹಾರ ನೀಡದೆ ಕೇವಲ ಕೇಂದ್ರಕ್ಕೆ ಪತ್ರ ಬರೆದು ಕೈತೊಳೆದುಕೊಳ್ಳುವ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೃಷಿ ಇಲಾಖೆ ಮುನ್ನಡೆಸಲು ಸಚಿವರೇ ಇಲ್ಲದಿರುವುದು ದೊಡ್ಡ ದುರಂತ. ಬರಗಾಲದಿಂದಾಗಿ ಪ್ರಮುಖವಾಗಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈತರು ಹೆಚ್ಚು ಸಂಕಷ್ಟಕ್ಕೀಡಾಗಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ಸಭೆ ಕೇವಲ ತೋರ್ಪಡಿಕೆಯ ಸಭೆಯಾಗಿತ್ತು. ಸಭೆಯಲ್ಲಿ ಆ ಭಾಗದ ಸಂಕಷ್ಟದಲ್ಲಿರುವ ರೈತರಿಗೆ ಸಿಕ್ಕ ಲಾಭ ಮಾತ್ರ ಶೂನ್ಯ. ಕೇಂದ್ರಕ್ಕೆ ಪತ್ರ ಬರೆಯಲು ಅಂಕಿ-ಅಂಶಗಳನ್ನು ಸಂಗ್ರಹಿಸುವ ಸ್ವಾರ್ಥ ಉದ್ದೇಶಕ್ಕೆ ಸಭೆ ಸೀಮಿತವಾಗಿತ್ತು ಎಂಬುದು ಇದೀಗ ಸ್ಪಷ್ಟವಾಗಿದೆ.

ಬರಗಾಲದ ಮಾಹಿತಿ ಸರ್ಕಾರಕ್ಕೆ ಇದ್ದರೂ ಮುಂಜಾಗೃತೆ ಕ್ರಮ ವಹಿಸದೆ ನಿರ್ಲಕ್ಷ್ಯ ತೋರಿದೆ. ಇದೀಗ ಕೇಂದ್ರ ಸರ್ಕಾರಕ್ಕೆ ಸಹಾಯ ಕೋರಿ ಪತ್ರ ಬರೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ತಮ್ಮ ತಪ್ಪು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅನ್ನದಾತರ ಹಿತರಕ್ಷಣೆ ಸದಾ ಸಿದ್ಧ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಮೊದಲು ರಾಜ್ಯದ ರೈತರಿಗೆ ತುರ್ತು ಪರಿಹಾರ ಬಿಡುಗಡೆ ಮಾಡಲಿ. ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಬದಲು ರೈತರ ಸಂಕಷ್ಟ ಆಲಿಸಲು ತಕ್ಷಣವೇ ಸಮರ್ಥ ಕೃಷಿ ಸಚಿವರನ್ನು ನೇಮಕ‌ ಮಾಡಬೇಕು. ಅವರು ಇಡೀ ರಾಜ್ಯದ ಪ್ರವಾಸ ನಡೆಸಿ, ರೈತರ ಅಹವಾಲುಗಳನ್ನು ಆಲಿಸಿ, ಪರಿಹಾರ ನೀಡುವುದರ ಜೊತೆಗೆ ಧೈರ್ಯ ತುಂಬುವ ಕೆಲಸ ಮಾಡಲಿ.

ರಾಜ್ಯದ ಜನತೆ ಹಾಗೂ ರೈತರು ಸರ್ಕಾರದ ಬೇಜವಾಬ್ದಾರಿತನವನ್ನು ಗಮನಿಸುತ್ತಿದ್ದಾರೆ. ಇನ್ನಾದರೂ ಮುಖ್ಯಮಮಂತ್ರಿಗಳು ತಮ್ಮ ತಪ್ಪಿನಿಂದ ನುಣೂಚಿಕೊಳ್ಳುವ ಕೆಲಸ ಮಾಡದೆ, ತಮ್ಮ ಕರ್ತವ್ಯ ನಿಭಾಯಿಸಿ ರೈತರ ಪರವಾಗಿ ನಿಲ್ಲಬೇಕು. ಇಲ್ಲದಿದ್ದರೆ ರೈತರ ಪರವಾಗಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಶ್ರೀ ಅರವಿಂದ ಬೆಲ್ಲದ ಅವರು ಎಚ್ಚರಿಸಿದ್ದಾರೆ.

Tags:

error: Content is protected !!