ಚುನಾವಣಾ ಆಯೋಗದ ನಿಯಮವನ್ನು ಗಾಳಿ ತೂರಿ ಸಾಂವಿಧಾನಿಕ ಹುದ್ದೆಯಲ್ಲಿಲ್ಲದ ಮಹಾನಗರ ಪಾಲಿಕೆ ಸದಸ್ಯೆಯ ಪತಿ ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಹೊರ್ತಿ ನೇತೃತ್ವದಲ್ಲಿ ಶನಿವಾರ ಸಂಜೆ ನಗರದ ಬಬಲೇಶ್ವರ ನಾಕಾ ಹತ್ತಿರದ ಅಲಿಖಾನ್ ಮಸೀದಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳ (ಬಿ.ಎಲ್.ಒ) ಸಭೆ ನಡೆಸಿದಲ್ಲದೆ, ಗುಂಪು ಗುಂಪಾಗಿ ಎಸ್.ಐ.ಆರ್ ನಡೆಸಿದ್ದು ಕೂಡಲೇ ಚುನಾವಣಾ ಅಧಿಕಾರಿಗಳು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಆಗ್ರಹಿಸಿದ್ದಾರೆ.


ಮನೆ ಮನೆಗೆ ಹೋಗಿ ಸಾರ್ವಜನಿಕರ ಎಸ್.ಐ.ಆರ್ ಮಾಡುತ್ತಿದ್ದ ವಾರ್ಡ್ ನಂ.32, 33 ಮತ್ತು 34ರ ಎಲ್ಲ ಬಿ.ಎಲ್.ಒ ಗಳಿಗೆ ವಾರ್ಡ್ ನಂ.33 ಮತ್ತು 34ರಲ್ಲಿ ಬಿ.ಎಲ್.ಒ ಸೂಪರವೈಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆಯ ರಿಯಾಜ್ ತಮದಡ್ಡಿ ಎಂಬಾತನೇ ಖುದ್ದಾಗಿ ಕರೆ ಮಾಡಿ ಸಭೆಗೆ ಬರುವಂತೆ ಒತ್ತಾಯಿಸಿ, ಕರೆಸಿಕೊಂಡು ಸಭೆ ನಡೆಸಿದ್ದು, ಅಕ್ಷಮ್ಯ ಅಪರಾಧವಾಗಿದೆ. ಈ ರಿತಿ ಕಾನೂನು ಬಾಹಿರವಾಗಿ ಸಭೆ ನಡೆಸಿದ್ದರಿಂದ ಆ ಭಾಗದ ಅನೇಕ ಮತದಾರರು ಪರದಾಡುವಂತಾಯಿತು. ಹೀಗಾಗಿ ಕರೆ ಮಾಡಿ ಸಭೆಗೆ ಬರುವಂತೆ ಒತ್ತಾಯಿಸಿ ಕಿರಿಕಿರಿ ಮಾಡಿದ ಸೂಪರವೈಸರ್ ರಿಯಾಜ್ ತಮದಡ್ಡಿ ಎಂಬಾತನನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು. ಕಾನೂನು ಬಾಹಿರವಾಗಿ ಸಭೆ ನಡೆಸಿದ ಅಬ್ದುಲ್ ರಜಾಕ್ ಹೊರ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ನಗರದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಆರಂಭಗೊಂಡಾಗಿನಿಂದ ತಮ್ಮ ಖೊಟ್ಟಿ ಮತದಾರರು ಪಟ್ಟಿಯಲ್ಲಿ ಡಿಲೆಟ್ ಆಗುತ್ತಾರೆ ಎಂಬ ಭಯದಿಂದ ಮೊದಲಿಗೆ ವಿರೋಧ ವ್ಯಕ್ತಪಡಿಸಿದರು. ಅದಕ್ಕೆ ಅವಕಾಶ ಸಿಗಲಿಲ್ಲ ಎಂದಾಕ್ಷಣ ಹಿಂದೂಗಳ ಪ್ರದೇಶಗಳಲ್ಲಿ ಎಸ್.ಐ.ಆರ್ ಪ್ರಕ್ರಿಯೆ ನಡೆದಾಗ ಕಾನೂನು ಬಾಹಿರವಾಗಿ ಗೂಂಡಾಗಳೊಂದಿಗೆ ಬಂದು ಅಡೆತಡೆ ಉಂಟು ಮಾಡಿ ಬಿ.ಎಲ್.ಒ ಗಳ ಎಸ್.ಐ.ಆರ್ ಸಮಯ ವ್ಯರ್ಥ ಮಾಡುವುದು, ವಿನಾಕಾರಣ ತೊಂದರೆ ನೀಡುವುದು, ಮುಸ್ಲಿಂರ ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ಮಸೀದಿಗಳಲ್ಲಿ ಬಿ.ಎಲ್.ಒ ಗಳನ್ನು ಸೇರಿ ಸಭೆ ನಡೆಸುವುದು, ಅಲ್ಲಿಯೇ ತಮ್ಮ ಜನರನ್ನು ಗುಂಪು ಗುಂಪಾಗಿ ಸೇರಿಸಿ ಖೊಟ್ಟಿ ಮತದಾರರನ್ನು ಸೇರಿಸುವ ಕುತಂತ್ರ ನಡೆಸಿದ್ದಾರೆ.
ಈ ರೀತಿ ನಗರದ ಎಲ್ಲ ಭಾಗಗಳಲ್ಲಿರುವ ಮಸೀದಿಗಳಲ್ಲಿಯೂ ಪ್ರತಿ ದಿನ ನಿಯಮಬಾಹಿರ ಎಸ್.ಐ.ಆರ್ ಪ್ರಕ್ರಿಯೇ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಶನಿವಾರ ಬಬಲೇಶ್ವರ ನಾಕಾ ಹತ್ತಿರದ ಅಲಿಖಾನ್ ಮಸೀದಿಯಲ್ಲಿ ನಡೆಯುತ್ತಿರುವ ಸಭೆಗೆ ನಮ್ಮ ಬಿ.ಎಲ್ಒ-2 ಗಳು ವೀಕ್ಷಣೆ ಮಾಡಿದಾಗ ಕಾಂಗ್ರೆಸ್ ಮುಖಂಡ ಅಬ್ದುಲ್ ರಜಾಕ್ ಹೊರ್ತಿ ಹಾಗೂ ಬಿ.ಎಲ್.ಒ ಸೂಪರ್ ವೈಸರ್ ರಿಯಾಜ್ ತಮದಡ್ಡಿ ನೇತೃತ್ವದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ನಡೆಸುತ್ತಿರುವುದು ವಿಡಿಯೋ ಸೆರೆ ಹಿಡಿಯಲಾಗಿದೆ. ಈ ಆಧಾರದ ಮೇಲೆ ತಕ್ಷಣ ಸೂಪರವೈಸರ್ ರಿಯಾಜ್ ಮತ್ತು ರಜಾಕ್ ಹೊರ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
