ಆಸ್ತಿ ವಿವಾದ ವಿಚಾರವಾಗಿ ಭೀಮಾ ತೀರದಲ್ಲಿ ಮತ್ತೆ ರಕ್ತದೋಕುಳಿ ಹರಿದಿತ್ತು. ಜಮೀನಿನಲ್ಲೇ ಒಂದೇ ಕುಟುಂಬದ ಐವರು ಸೇರಿ ಒಟ್ಟು ಆರು ಜನರ ಬರ್ಭರ ಕೊಲೆ ಮಾಡಲಾಗಿತ್ತು, ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಿಗೆ ಕೇವಲ 48 ಗಂಟೆಗಳಲ್ಲಿ 12 ಜನರನ್ನು ಪೊಲೀಸರು ಬಂಧಿಸಿದ್ದರು, ಈಗ ಪ್ರಕರಣದ ಪ್ರಮುಖ ಆರೋಪಿ ಸೇರಿ ಇನ್ನೂಳಿದ 6 ಜನರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು.. ಶಾಂತವಾಗಿದ್ದ ಭೀಮಾ ತೀರದಲ್ಲಿ ಮತ್ತೆ ರಕ್ತದ ಮಡುವಿನಲ್ಲಿ ಹೆಣಗಳು ಉರುಳಿದ್ದವು. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಹೊರ ಭಾಗದ ಜಮೀನಲ್ಲಿ ಭೀಕರ ಹತ್ಯಾಕಾಂಡ ನಡೆದಿತ್ತು. ಕಳೆದ ಮೇ.29 ರಂದು ಒಂದೇ ಕುಟುಂಬದ ಐವರು ಸೇರಿದಂತೆ ಆರು ಜನರನ್ನು ಅತ್ಯಂತ ಕ್ರೂರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಮೇಲ್ನೋಟಕ್ಕೆ ಇದು ಜಮೀನು ವಿವಾದದಂತೆ ಕಂಡರೂ, ಈ ರಕ್ತಪಾತದ ಹಿಂದೆ 2015 ರ ಹಳೆಯ ಪ್ರೇಮ ಪ್ರಕರಣ, ಕಿಡ್ನ್ಯಾಪ್ ಮತ್ತು ಕೊಲೆಯ ದ್ವೇಷದ ಕಥೆ ಇದರಲ್ಲಿ ಕಂಡು ಬಂತು. ಚಡಚಣ ಪಟ್ಟಣದ ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ (55), ರಾಹುಲ್ ನಿರಾಳೆ (25), ಸಮರ್ಥ ನಿರಾಳೆ (23) ಹಾಗೂ ಇವರ ಜೊತೆಗಿದ್ದ ಶಬ್ಬೀರ್ ಅತ್ತಾರ (45) ಎಂಬಾತರನ್ನು ಬರ್ಭರ ಕೊಲೆ ಮಾಡಲಾಗಿತ್ತು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅರವಿಂದ ಕಟಗೆ ಮತ್ತು ಸಂದೀಪ್ ಮಾನೆ ಎಂಬುವವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂದು ಘಟನಾ ಸ್ಥಳಕ್ಕೆ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್, ವಿಜಯಪುರ ಎಸ್ ಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಸಹಿತ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಇನ್ನೂ ಘಟನೆ ನಡೆದ 48 ಗಂಟೆಯಲ್ಲಿ 12 ಜನ ಆರೋಪಿಗಳ ಹೆಡೆ ಮುರಿ ಕಟ್ಟಿದ್ದರು ಪೊಲೀಸರು. ಬಂಧಿತ ಆರೋಪಿಗಳು ಮಹಾಸಿದ್ದ ಶ್ರೀಮಂತ ಬಿರಾದಾರ್ (44), ಮಹೇಶ ಲಕ್ಷ್ಮಣ ಬಿರಾದಾರ್ (22), ರಾಜಕುಮಾರ ಸಿದ್ರಾಮ ಕೋಳಿ (28), ರಾಜು ಚಂದ್ರಕಾಂತ ಉಗಾರ (20), ಯಲ್ಲಪ್ಪ ಮಹಾದೇವ ಅರಕೇರಿ (25), ಕಲ್ಲನಗೌಡ ಈಶ್ವರಗೌಡ ಪಾಟೀಲ (65), ಲಾಯಪ್ಪ ನೀಲಪ್ಪ ಬಿರಾದಾರ (65), ಸುಭಾಸ್ ಮಹಾಸಿದ್ದ ಬಿರಾದಾರ್ (21), ರಾವಸಾಬ್ ಅವದೂತ್ ಬಿರಾದಾರ್ (20), ಗಜಾನಂದ ಭೂತಾಲೆ ಬಿರಾದಾರ್ (20), ಮಲಕಾರಿ ಹಣಮಂತ ಕೋಳಿ(18), ಸಂಜೀವ ಮಹಾದೇವ ಅರಕೇರಿ (31) ಬಂಧಿತ ಆರೋಪಿಗಳಾಗಿದ್ದರು. ಈ ಕೊಲೆಯಲ್ಲಿ ಲೈಸನ್ಸ್ ಹೊಂದಿದ ಬಂದೂಕಿನಿಂದ ಸಹಿತ ಗುಂಡು ಹಾರಿಸಿ ಬಳಿಕ ಮಚ್ಚಿನಿಂದ ಕೊಚ್ಚಿ ಮೊಲೆ ಮಾಡಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದರು…

ಇದೇ ಪ್ರಕರಣದ ತನಿಖೆ ಮುಂದು ವರೆಸಿದ್ದ ಪೊಲೀಸರು ಈಗ ಮತ್ತೆ 6 ಜನ ಆರೋಪಿಗಳನ್ನು ಬಂಧಿಸಿದ್ದು ಈಗ ಬಂಧಿತರ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ. ಪ್ರಕರಣದ ಪ್ರಮುಖ ಹಾಗೂ ಏ 1 ಆರೋಪಿ ಅಪ್ಪುಗೌಡ ಪಾಟೀಲ (49), ಶಂಕ್ರೆಪ್ಪ ಅರಕೇರಿ (33), ಅಪ್ಪಾಸಾಹೇಬ್ ಭೋವಿ (49), ಸತ್ಯಪ್ಪ ಬಿರಾದಾರ್ (46), ಸುಲ್ತಾನ್ ಬಿರಾದಾರ್ (24), ಹಾಗೂ ಮಹೇಶ ಬಿರಾದಾರ್ (25) ಎಂಬಾತರನ್ನು ಬಂಧಿಸಿ ಕೊರ್ಟ್ ಗೆ ಹಾಜರು ಪಡಿಸಿದ್ದಾರೆ.
ಬೈಟ್ : ಲಕ್ಷ್ಮಣ ನಿಂಬರಗಿ, ಎಸ್ ಪಿ ವಿಜಯಪುರ…
ಪ್ರಗತಿ ಪರ ರೈತರು, ನೂರಾರು ಎಕರೆ ಜಮೀನು ಹೊಂದಿದ್ದ ನಿರಾಳೆ ಕುಟುಂಬಸ್ಥರಿಗೆ ವಿವಾದದಲ್ಲಿದ್ದ ಜಮೀನು ಖರೀದಿ ಮಾಡಿದ್ದೇ ಮುಳುವಾಗಿ ಬರ್ಭರ ಹತ್ಯೆಯಾಯಿತು. ಒಂದೇ ಕುಟುಂಬದ ಐವರು ಕೊಲೆಯಾಗಿದ್ದು ಚಡಚಣ ಪಟ್ಟಣದ ಜನತೆ ಮಮ್ಮಲ ಮರುಗಿದ್ದರು. ಇನ್ನೂ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ 18 ಜನ ಆರೋಪಿಗಳಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದು ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ…
