ದಶಕದ ಹೋರಾಟಕ್ಕೆ ಸಿಕ್ಕಿತು ದೊಡ್ಡ ಜಯ

ಹದಿನಾರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ
ಕೋರ್ಟ್ ತೀರ್ಪಿಗೆ ತಲೆಬಾಗಿದ ಮಲ್ಲಮ್ಮ ಗೌಡರ್
ಪರಿಹಾರದ ಹಣ ಮಕ್ಕಳ ಶಿಕ್ಷಣಕ್ಕೆ ಬಳಕೆ
ದಶಕದ ಸುದೀರ್ಘ ಹೋರಾಟದ ಬಳಿಕ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಈ ತೀರ್ಪಿನ ಕುರಿತು ಯೋಗೀಶ್ ಗೌಡ ಅವರ ಪತ್ನಿ ಮಲ್ಲಮ್ಮ ಪ್ರತಿಕ್ರಿಯಿಸಿದ್ದು, “ನ್ಯಾಯಾಲಯದ ತೀರ್ಪಿಗೆ ಹಾಗೂ ನ್ಯಾಯಾಧೀಶರ ಆದೇಶಕ್ಕೆ ನಾನು ತಲೆಬಾಗಿ ಸ್ವಾಗತಿಸುತ್ತೇನೆ” ಎಂದು ಭಾವುಕರಾಗಿ ನುಡಿದರು.
ಧಾರವಾಡ ತಾಲ್ಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಪತಿ ಯೋಗೀಶ್ ಗೌಡರ ಸಾವಿಗೆ ಕಾರಣರಾದ ವಿನಯ್ ಕುಲಕರ್ಣಿ ಸೇರಿದಂತೆ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಮಲ್ಲಮ್ಮ ಮಾತನಾಡಿದರು.
“ನ್ಯಾಯಾಧೀಶರ ತೀರ್ಪೇ ಅಂತಿಮ, ಅವರ ಆದೇಶಕ್ಕೆ ನಾವು ಸದಾ ಬದ್ಧರಾಗಿರುತ್ತೇವೆ. ನನ್ನ ಮಕ್ಕಳು ಇಂದಿಗೂ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇದೀಗ ನ್ಯಾಯಾಲಯವು ಆರೋಪಿಗಳಿಗೆ ದಂಡ ವಿಧಿಸಿ, ಅದರಲ್ಲಿ 16 ಲಕ್ಷ ರೂಪಾಯಿಗಳನ್ನು ಯೋಗೀಶ್ ಗೌಡರ ಕುಟುಂಬಕ್ಕೆ ನೀಡುವಂತೆ ಆದೇಶಿಸಿದೆ. ನನ್ನ ಒಡಲಾಳದ ನೋವು ಮತ್ತು ಕರಳಿನ ಕೂಗು ನ್ಯಾಯಾಧೀಶರಿಗೆ ಕೇಳಿಸಿದೆ ಎಂದು ನನಗನ್ನಿಸುತ್ತಿದೆ. ನ್ಯಾಯಾಧೀಶರು ನೀಡಿದ ಈ ಪರಿಹಾರದ ಹಣದಿಂದ ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಲಿ ಎನ್ನುವ ಆಶಯ ನನ್ನದಾಗಿದೆ. ಬಹುಶಃ ಇದೇ ಉದ್ದೇಶದಿಂದ ನ್ಯಾಯಾಲಯ ಈ ಆದೇಶ ನೀಡಿದೆ ಎಂದು ಭಾವಿಸುತ್ತೇನೆ. ಒಟ್ಟಿನಲ್ಲಿ ನನ್ನ ಪತಿಯ ಸಾವಿಗೆ ನ್ಯಾಯಾಧೀಶರು ನ್ಯಾಯ ಒದಗಿಸಿದ್ದಾರೆ,” ಎಂದು ಅವರು ತಿಳಿಸಿದರು.
