ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ರಸ್ತೆ ಗುಂಡಿಗಳ ಅವಾಂತರಕ್ಕೆ ಮತ್ತೊಂದು ಜೀವದ ಬಲಿ ದೇವರೆ ಅನ್ನುವಂತಾಗಿದೆ. ಬೈಕ್ನಲ್ಲಿದ್ದ ಮಹಿಳೆಯೊಬ್ಬರು ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದು, ಕಣ್ಣೆದುರಲ್ಲೇ ಟಿಪ್ಪರ್ ಹರಿದು ಎಡಗಾಲು ಕಟ್ ಆಗಿರುವ ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಚಿತ್ತರಗಿ ಆಸ್ಪತ್ರೆ ಬಳಿ ರಸ್ತೆ ಗುಂಡಿಯಿಂದಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಬಸುಮ್ ನದಾಫ್ (೨೫) ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬನಹಟ್ಟಿಯಿಂದ ರಬಕವಿಯ ಎಕ್ಸರ್ಪ್ ಸ್ಕೂಲ್ ಕಡೆಗೆ ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿದ್ದ ದೊಡ್ಡ ಗುಂಡಿಯನ್ನು ತಪ್ಪಿಸಲು ಹೋಗಿ ಬೈಕ್ನಿಂದ ಕೆಳಗೆ ಬಿದ್ದ ತಬಸುಮ್ ಅವರ ಕಾಲಿನ ಮೇಲೆಯೇ ಏಕಾಏಕಿ ಟಿಪ್ಪರ್ ಹರಿದು ಹೋಗಿದ್ದು, ಪರಿಣಾಮ ಅವರ ಎಡಗಾಲು ಕಟ್ ಆಗಿದೆ. ತಕ್ಷಣವೇ ಗಾಯಾಳು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಗೆ ಕಾರಣವಾದ ಟಿಪ್ಪರ್ ಚಾಲಕನನ್ನು ತೇರದಾಳ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

