ವಿಜಯಪುರ ನಗರದ ಕವಳಿ ಗೇಟ್ ಸಮೀಪದ ಕಾಳಿಕಾದೇವಿ ದೇವಸ್ಥಾನದಿಂದ ಆರಂಭವಾದ ಬೃಹತ್ ಜಲಕುಂಭ ಮೆರವಣಿಗೆ, ಮಹಾತ್ಮ ಗಾಂಧಿ ವೃತ್ತ, ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಮಾರ್ಗವಾಗಿ ಇಂಡಿ ರಸ್ತೆಯ ರೈಲ್ವೆ ಗೇಟ್ ಸಮೀಪದ ಮರಗಮ್ಮ ದೇವಸ್ಥಾನವರೆಗೆ ಸಾಗಿತು. ಮೆರವಣಿಗೆಯಲ್ಲಿ ಗೌಳಿ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಜಾತ್ರೆಗೆ ವಿಶೇಷ ಮೆರುಗು ತಂದರು.


ಶುಕ್ರವಾರ ಮುಂಜಾನೆ 3.30ಕ್ಕೆ ಪಂಚಾಮೃತ ಅಭಿಷೇಕ, ಬಳಿಕ ಮಹಾಲಕ್ಷ್ಮಿ ಮಹಾಪೂಜೆ ಹಾಗೂ ಬೆಳಗ್ಗೆ 5.30ಕ್ಕೆ ಮಂಗಳಾರತಿ ನೆರವೇರಲಿದೆ. ಮಧ್ಯಾಹ್ನ 12 ಗಂಟೆಯಿಂದ ಸಾವಿರಾರು ಭಕ್ತರಿಗೆ ಮಹಾ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರೆಯ ಅಂಗವಾಗಿ ಗೌಳಿ ಸಮಾಜದ ಮಹಿಳೆಯರಿಗಾಗಿ ಸಂಗೀತ ಕುರ್ಚಿ ಸ್ಪರ್ಧೆ, ‘ಹೋಮ್ ಮಿನಿಸ್ಟರ್’ ಸ್ಪರ್ಧೆ, ಕೋಲ್ಹಾಪುರದ ರಾಕಿಂಗ್ ಹಿಟ್ಸ್ ಬೀಟ್ ತಂಡದಿಂದ ಸಂಗೀತ ರಸಮಂಜರಿ, 2026ರ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ, ಯುವಕರಿಂದ ಎಮ್ಮೆ ಓಡಿಸುವ ಸ್ಪರ್ಧೆ ಸೇರಿದಂತೆ ಹಲವು ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀ ಮಹಾಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಗೌಳಿ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.
