ಖಾನಾಪುರದ ಲೈಲಾ ಶುಗರ್ಸ್ ಸಂಸ್ಥೆಯಲ್ಲಿ ಸುದೀರ್ಘ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀರಂಗ ಪಾಟೀಲ ದಂಪತಿಗೆ ಖಾನಾಪುರದಲ್ಲಿ ಅದ್ಧೂರಿ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆ ಹಾಗೂ ವಿವಿಧ ಗಣ್ಯರ ಸಮ್ಮುಖದಲ್ಲಿ ನಿವೃತ್ತ ಉದ್ಯೋಗಿಗೆ ಬೀಳ್ಕೊಡುಗೆ ನೀಡಲಾಯಿತು.


ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮದ ಸುಪುತ್ರ ಹಾಗೂ ಲೈಲಾ ಶುಗರ್ಸ್ ಸಂಸ್ಥೆಯ ಮಾರಾಟ ವಿಭಾಗದ ಉದ್ಯೋಗಿ ಶ್ರೀರಂಗ ವಸಂತರಾವ್ ಪಾಟೀಲ ಅವರು ೨೭ ವರ್ಷಗಳ ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಖಾನಾಪುರದ ವರದ ಮಂಗಲ ಕಾರ್ಯಾಲಯದಲ್ಲಿ ಸತ್ಕಾರ ಸಮಾರಂಭ ಆಯೋಜಿಸಲಾಗಿತ್ತು. ಗರ್ಲಗುಂಜಿ ಗ್ರಾಂ.ಪಂ. ಮಾಜಿ ಅಧ್ಯಕ್ಷ ಗೋಪಾಲ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾನಾಪುರ ಶಾಸಕರು, ಲೈಲಾ ಶುಗರ್ಸ್ ಎಂ.ಡಿ., ಸಂಚಾಲಕರಾದ ಚಾಂಗಾಪಾ ನಿಲಜಕರ, ಯಲ್ಲಾಪಾ ತಿರವೀರ, ಸುಬ್ರಾವ್ ಪಾಟೀಲ, ಪರಶರಾಮ ಕಾಂಬಳೆ, ಪಿ ಕೆ ಪಿ ಎಸ್ ಮಾಜಿ ಅಧ್ಯಕ್ಷ ಸುಭಾಷ ವಸಂತರಾವ್ ಪಾಟೀಲ, ಮಾಜಿ ತಾ.ಪಂ. ಸದಸ್ಯ ಪಾಂಡುರಂಗ ಸಾವಂತ, ಲೈಲಾ ಶುಗರ್ಸ್ ಕೃಷಿ ಅಧಿಕಾರಿ ಬಾಳಾಸಾಹೇಬ ಶೇಲಾರ, ಮಾಜಿ ಗ್ರಾಂ.ಪಂ. ಅಧ್ಯಕ್ಷ ಹಣಮಂತ ಮೇಲಗೆ, ಪರಶರಾಮ ಚೌಗುಲೆ, ಅಡ್ವೋಕೇಟ್ ಚೇತನ ಮಣೇರಿಕರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಶ್ರೀರಂಗ ಪಾಟೀಲ ಹಾಗೂ ಅವರ ಧರ್ಮಪತ್ನಿ ಸುನೀತಾ ಪಾಟೀಲ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ಮತ್ತು ಉಡುಗೊರೆ ನೀಡಿ ಸತ್ಕರಿಸಲಾಯಿತು.
ತಮ್ಮ ಸೇವಾ ಅವಧಿಯಲ್ಲಿನ ಪ್ರೀತಿ-ವಿಶ್ವಾಸವನ್ನು ಶ್ರೀರಂಗ ಪಾಟೀಲ ಸ್ಮರಿಸಿದರೆ, ಶಾಸಕರು ಹಾಗೂ ಗಣ್ಯರು ಅವರ ಪ್ರಾಮಾಣಿಕ ಸೇವೆಯನ್ನು ಶ್ಲಾಘಿಸಿ ಮುಂದಿನ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು. ನಂದಕುಮಾರ ನಿಟ್ಟೂರಕರ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಜು ಸಿದ್ಧಾಣಿ ವಂದಿಸಿದರು.
