ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಹಾಗೂ ಪ್ರಮುಖ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ಪಾಟೀಲ್ ಅವರನ್ನು ಕೆಎಲ್ಇ ಸಂಸ್ಥೆ ವತಿಯಿಂದ ಸತ್ಕರಿಸಲಾಗಿದೆ. ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಅವರ ಅಪೂರ್ವ ಸಮಾಜ ಸೇವೆಯನ್ನು ಗುರುತಿಸಿ ಈ ಗೌರವ ಸಮರ್ಪಿಸಲಾಗಿದೆ.

ತಮ್ಮ ಅಮೂಲ್ಯವಾದ ಸಮಯವನ್ನು ಸಮಾಜಮುಖಿ ಕಾರ್ಯಗಳಿಗಾಗಿ ಮೀಸಲಿಟ್ಟು, ಹಗಲಿರುಳು ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಗರ್ಲಗುಂಜಿಯ ಸಮಾಜ ಸೇವಕ ಪ್ರಸಾದ್ ಪಾಟೀಲ್ ಅವರಿಗೆ ಕೆಎಲ್ಇ ಆಸ್ಪತ್ರೆ ಮತ್ತು ಕೆಎಲ್ಇ ಸಂಸ್ಥೆಯ ವತಿಯಿಂದ ಆತ್ಮೀಯ ಸತ್ಕಾರ ನೀಡಲಾಯಿತು. ತುರ್ತು ಸಂದರ್ಭಗಳಲ್ಲಿ ಹಗಲು-ರಾತ್ರಿ ಎನ್ನದೆ ಶ್ರಮಿಸಿ ಸುಮಾರು 15 ಕ್ಕೂ ಹೆಚ್ಚು ಜನರ ಜೀವ ಉಳಿಸಿದ ಮತ್ತು ಸ್ವತಃ 33 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಇವರ ಅನುಪಮ ಸಮಾಜ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ವೇದಿಕೆಯಲ್ಲಿ ಈ ಸನ್ಮಾನ ಮಾಡಲಾಯಿತು. ಸಮಾಜಕ್ಕೆ ಪ್ರೇರಣೆಯಾಗಿರುವ ಇವರ ಇಂತಹ ಮಾನವೀಯ ಕಾರ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಕೆಎಲ್ಇ ಸಂಸ್ಥೆಯ ಹಿರಿಯ ವೈದ್ಯರು, ಆಡಳಿತ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದು ಪ್ರಸಾದ್ ಪಾಟೀಲ್ ಅವರ ನಿರಂತರ ಸಮಾಜಮುಖಿ ಸೇವಾ ಮನೋಭಾವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
