ಸರ್ಕಾರಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಕಿದ್ದ ಅಧಿಕಾರಿಯೊಬ್ಬರು ನಡುರಸ್ತೆಯಲ್ಲಿ ಕಾರಿನೊಳಗೆ ಫೈಲ್ಗಳಿಗೆ ಸಹಿ ಹಾಕುತ್ತಾ ಅಸಡ್ಡೆ ತೋರಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಸಾರ್ವಜನಿಕರು ಇದನ್ನು ಪ್ರಶ್ನಿಸಿದಾಗ “ಇದೇನು ಫೈನಾನ್ಸಿಯಲ್ ಕೆಲಸವಲ್ಲ” ಎಂದು ಅಧಿಕಾರಿ ನೀಡಿದ ಉಡಾಫೆ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಾಗಲಕೋಟೆಯ ನವನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿ ಇದ್ದಲಗಿ ಅವರ ಬೇಜವಾಬ್ದಾರಿತನ ಬಯಲಾಗಿದೆ. ಕಚೇರಿ ಸಿಬ್ಬಂದಿಯಿಂದ ಕಡತಗಳನ್ನು ನಡುರಸ್ತೆಗೆ ತರಿಸಿಕೊಂಡ ಅಧಿಕಾರಿ, ಕಾರಿನಲ್ಲೇ ಕುಳಿತು ಸಹಿ ಮಾಡುತ್ತಿದ್ದಾಗ ಸ್ಥಳೀಯ ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ ಪ್ರಶ್ನಿಸಿದ್ದಾರೆ. “ಕಚೇರಿ ಇರೋದು ಯಾವುದಕ್ಕೆ?” ಎಂಬ ಪ್ರಶ್ನೆಗೆ ಉತ್ತರಿಸಲಾಗದ ಅಧಿಕಾರಿ, ತಬ್ಬಿಬ್ಬಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಸರ್ಕಾರಿ ಕೆಲಸದ ಪಾರದರ್ಶಕತೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತನಿಖೆಯ ನಂತರ ಈ ಅಧಿಕಾರಿಯ ವಿರುದ್ಧ ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
