ಚಿಕ್ಕೋಡಿ :ಮಹಾರಾಷ್ಟ್ರದ ಕೊಂಕಣ ಭಾಗ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಯ ಪ್ರಮಾಣ ತಗ್ಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.

ನದಿಗೆ ಹರಿದುಬರುವ ಒಳಹರಿವಿನಲ್ಲಿ ಗಣನೀಯವಾಗಿ ಇಳಿಮುಖ ಕಂಡುಬಂದಿದ್ದು, ಪ್ರವಾಹ ಭೀತಿಯಲ್ಲಿದ್ದ ಕೃಷ್ಣಾ ಮತ್ತು ವೇದಗಂಗಾ ನದಿತೀರದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ನಿನ್ನೆಗಿಂತ ಇಂದು ಕಲ್ಲೋಳ ಬ್ಯಾರೇಜ್ಗೆ ಹರಿದುಬರುವ ನೀರಿನ ಪ್ರಮಾಣದಲ್ಲಿ 1 ಲಕ್ಷ 29 ಸಾವಿರ ಕ್ಯೂಸೆಕ್ ಕಡಿತಗೊಂಡಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶ ಹಾಗೂ ಕೊಯ್ನಾ ಭಾಗದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಕರ್ನಾಟಕದ ಗಡಿ ಭಾಗಕ್ಕೆ ಹರಿಯುವ ನೀರಿನ ರಭಸ ಕುಗ್ಗಿದೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದ ನದಿಗಳ ನೀರಿನ ಮಟ್ಟದಿಂದಾಗಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ತೋಟಪಟ್ಟಿ ಹಾಗೂ ನದಿತೀರದ ಗ್ರಾಮಗಳ ಜನರು ಆತಂಕಗೊಂಡಿದ್ದರು. ಕೆಲವು ಕೆಳಹಂತದ ಸೇತುವೆಗಳು ಜಲಾವೃತಗೊಳ್ಳುವ ಭೀತಿ ಎದುರಾಗಿತ್ತು. ಆದರೆ, ಈಗ ಒಳಹರಿವಿನ ಪ್ರಮಾಣ ಹಠಾತ್ ಇಳಿಮುಖವಾಗಿರುವುದರಿಂದ ನದಿ ಪಾತ್ರದ ರೈತರು ಹಾಗೂ ಸ್ಥಳೀಯ ಜನರು ನಿರಾಳರಾಗಿದ್ದಾರೆ.
