State

ರಾಜಕೀಯದಲ್ಲೂ ಧರ್ಮವಿಟ್ಟು ಕೆಲಸ ಮಾಡಬೇಕು: ದೇಗುಲ ಮಠದ ಪುಣ್ಯ ಸಂಸ್ಮರಣೋತ್ಸವದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಭಾಷಣ!

Share

ಕನಕಪುರದ ಶ್ರೀ ದೇಗುಲ ಮಠದ ಲಿಂಗೈಕ್ಯ ಪರಮಪೂಜ್ಯ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಮಹಾಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಶ್ರೀಗಳ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆಯಬೇಕು ಮತ್ತು ರಾಜಕೀಯದಲ್ಲೂ ಧರ್ಮ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಾವು ಈ ಮಠಕ್ಕೆ ಒಬ್ಬ ಭಕ್ತನಾಗಿ ಬಂದಿರುವುದಾಗಿ ತಿಳಿಸಿದರು. ಶಿವಾಲ ಮೂರ್ತಿ ಬೆಟ್ಟದಲ್ಲಿ ತಂದೆ-ತಾಯಿ ಹರಕೆ ಹೊತ್ತಿದ್ದರಿಂದ ಹಾಗೂ ತಾಯಿ ಶಿವನಲ್ಲಿ ಬೇಡಿಕೊಂಡಿದ್ದರಿಂದ ತಮಗೆ ಶಿವಕುಮಾರ್ ಎಂದು ಹೆಸರಿಡಲಾಯಿತು ಎಂಬ ಕುಟುಂಬದ ಹಿನ್ನೆಲೆಯನ್ನು ಹಂಚಿಕೊಂಡರು. ನಮ್ಮ ಮನೆಯಲ್ಲಿ ಎಲ್ಲರೂ ದೇಗುಲ ಮಠದ ಭಕ್ತರಾಗಿದ್ದು, ತಾವು ಈಗಲೂ ಧರ್ಮವನ್ನು ಉಳಿಸಿಕೊಂಡು, ಧರ್ಮದ ಮಾರ್ಗದಲ್ಲೇ ಜನಸೇವೆಯ ಕೆಲಸ ಮಾಡುತ್ತಿರುವುದಾಗಿ ಸಿಎಂ ಭಾವನಾತ್ಮಕವಾಗಿ ನುಡಿದರು.

ಶುಕ್ರವಾರ ನಡೆದ ಈ ಧಾರ್ಮಿಕ ಮಹಾಸಭೆಯಲ್ಲಿ ಮೈಸೂರು ಸುತ್ತೂರು ಶ್ರೀ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ನಾಡಿನ ಪ್ರಮುಖ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ವಿ. ಸೋಮಣ್ಣ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಶಾಸಕರಾದ ಗಣೇಶ್ ಪ್ರಸಾದ್, ಶಿವಗಂಗಾ, ಎಂಎಲ್ಸಿ ಎಸ್. ರವಿ ಹಾಗೂ ಮಾಜಿ ಶಾಸಕ ಅನ್ನದಾನಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಉಪಸ್ಥಿತರಿದ್ದು ಲಿಂಗೈಕ್ಯ ಶ್ರೀಗಳಿಗೆ ಕೃತಜ್ಞತಾ ಪೂರ್ವಕ ನಮನ ಸಲ್ಲಿಸಿದರು.

Tags:

error: Content is protected !!