ಮನೆಯ ಮೇಲ್ಬಾವಣಿ ಕುಸಿದು ಮಹಿಳೆಯೊಬ್ಬರು ಜೀವಂತ ಸಮಾಧಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಗೌರೀಶ್ವರ ದೇವಸ್ಥಾನದ ಬಳಿಯಿರುವ ಮನೆಯಲ್ಲಿ ವಾಸವಾಗಿದ್ದ ಮಹಾದೇವಿ ವಾರದ ಮೃತರು. ಮೊನ್ನೆಯಷ್ಟೇ ಸುರಿದ ಮಳೆಗೆ ಹಳೆಯ ಬಿಲ್ಡಿಂಗ್ ತೋಯ್ದು ತೊಪ್ಪೆಯಾಗಿತ್ತು. ಬೆಳಗಿನ ಜಾವ ಮಹಾದೇವಿ ಮಲಗಿದ್ದವೇಳೆ ಏಕಾಏಕಿ ಕಟ್ಟಡದ ಛಾವಣಿ ಕುಸಿದು ಬಿದ್ದಿದೆ.


ಇದರಿಂದಾಗಿ ಅವರು ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಸೆಖೆ ಇದ್ದ ಕಾರಣ ಮಹಾದೇವಿ ಪತಿ ಶಿವಾನಂದ ಮನೆಯ ಹೊರಗೆ ಮಲಗಿದ್ದರು. ಇದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



