ತನ್ನಪಾಡಿಗೆ ತಾನು ದುಡಿಯಲು ಹೊರಟ್ಡಿದ್ದವನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಿರುವ ಘಟನೆ, ಧಾರವಾಡದ ಹಾವೇರಿಪೇಟೆಯಲ್ಲಿ ಇಂದು ನಡೆದಿದ್ದು, ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.

ಮಹ್ಮದ್ ರಫಿಕ್ (35) ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದಾನೆ. ಧಾರವಾಡದ ಹಾವೇರಿಪೇಟೆಯಲ್ಲಿ ಈ ದುರ್ಘಟನೆ ನಡೆದಿದೆ. ಮನೆಯಿಂದ ಸೆಂಟ್ರಿಂಗ್ ಕೆಲಸಕ್ಕೆ ತೆರಳಿದ್ದ ವ್ಯಕ್ತಿ, ಹೋದ ಕೆಲವೇ ಹೊತ್ತಿನಲ್ಲಿ ಚಾಕು ಇರಿತದ ರಕ್ತ ಬಟ್ಟೆಯಲ್ಲಿ ಮನೆಗೆ ಬಂದು ಗಾಯಕ್ಕೆ ಬಟ್ಟೆ ಕಟ್ಟಿಕೊಂಡು ತನ್ನ ಬೈಕ್ ಮೇಲೆಯೇ ಹುಬ್ಬಳ್ಳಿಯ ಕೀಮ್ಸದ ಆಸ್ಪತ್ರೆಗೆ ದಾಖಲಾಗಲು ತೆರಳುತ್ತಿದ್ದನಂತೆ. ಈ ವೇಳೆ ತೀವ್ರ ರಕ್ತ ಸ್ರಾವದಿಂದಾಗಿ ಹುಬ್ಬಳ್ಳಿ ಧಾರವಾಡ ರಸ್ತೆಯ ಮಧ್ಯ ನವನಗರದಲ್ಲಿ ಮೋರ್ಚೆ ಹೋಗಿ ಬಿದಿದ್ದಾನೆ. ಕೂಡಲೇ ಸ್ಥಳೀಯರ ಮಾಹಿತಿ ಮೇರೆಗೆ ಮೋರ್ಚೆ ಹೋಗಿ ಬಿದಿದ್ದ ರಫಿಕನನ್ನು ನವನಗರ ಎಪಿಎಂಸಿ ಠಾಣೆಯ ಪೊಲೀಸರು ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಧಾರವಾಡ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಚಾಕು ದಾಳಿಯ ನಿಖರ ಕಾರಣ ಹಾಗೂ ದುಷ್ಕರ್ಮಿಗಳ ವಿವರ ಪೊಲೀಸರ ಪ್ರಾಥಮಿಕ ತನಿಖೆ ಬಳಿಕವಷ್ಟೇ ತಿಳಿದು ಬರಬೇಕಾಗಿದೆ.

