• ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ
• ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯವಾಣಿ
• ದಾವಣಗೆರೆ, ಬಾಗಲಕೋಟೆಯಲ್ಲಿ ಕೈ ಮೇಲು
• ಅಧಿಕಾರಿಗಳ ಎಡವಟ್ಟು ವಿರುದ್ಧ ಆಕ್ರೋಶ

ರಾಜ್ಯದ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಕಿತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದಾವಣಗೆರೆಯಲ್ಲಿ ಮತ ಅಂತರ ಕಡಿಮೆಯಾಗುವ ಸಾಧ್ಯತೆ ಇದ್ದರೂ ಅಂತಿಮವಾಗಿ ಕಾಂಗ್ರೆಸ್ ಜಯ ಸಾಧಿಸಲಿದೆ ಎಂದು ಹೇಳಿದರು. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಮಾರು 5,000 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿರುವುದಾಗಿ ತಿಳಿಸಿದರು. ದಾವಣಗೆರೆಯಲ್ಲಿ “ಹಾವು-ಏಣಿ ಆಟ”ದಂತ ಪರಿಸ್ಥಿತಿ ಇದ್ದರೂ ಗೆಲುವು ನಮ್ಮದೇ ಎಂದರು.
ಟಿಕೆಟ್ ಹಂಚಿಕೆ ವೇಳೆ ಉಂಟಾದ ಗೊಂದಲ ಈಗ ನಿವಾರಣೆಯಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಕೂಡ ಕೆಲ ಕ್ಷೇತ್ರಗಳಲ್ಲಿ ಸೋಲು ಕಂಡಿರುವುದನ್ನು ಉಲ್ಲೇಖಿಸಿದರು.ಶೃಂಗೇರಿ ವಿಧಾನಸಭಾ ಮತ ಎಣಿಕೆಯಲ್ಲಿ ಅಧಿಕಾರಿಗಳ ತಪ್ಪಿನಿಂದ ಬ್ಯಾಲೆಟ್ ಪೇಪರ್ ಎಣಿಕೆ ನಡೆದಿರುವುದಾಗಿ ಆರೋಪಿಸಿದರು. ಗಾಂಧಿನಗರದಲ್ಲಿ ಒಂದು ಬಾಕಿ ಇದ್ದು, ಅಲ್ಲಿ 6 ಮತಗಳ ಹೆಚ್ಚಳ ವಿಚಾರ ಸ್ಪಷ್ಟವಾಗಬೇಕಿದೆ ಎಂದು ಹೇಳಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷವಾಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಅವರು, ಅಂತಿಮ ಫಲಿತಾಂಶಕ್ಕಾಗಿ ಸಂಜೆವರೆಗೆ ಕಾಯಬೇಕು ಎಂದು ಹೇಳಿದರು.
ನಗರ ಸಾರಿಗೆಗೆ ಒಟ್ಟು 750 ಹೊಸ ಬಸ್ ನೀಡಲಾಗಿದೆ. ಡಿಪೋಗಳನ್ನು ನಿರ್ಮಿಸಲು ಕಾಮಗಾರಿ ಆರಂಭಿಸಲಾಗಿದೆ. ಜಿಸಿಸಿ ಮಾದರಿಯಲ್ಲಿ ಬಸ್ ಸೇವೆ ಆರಂಭಿಸಲಾಗುತ್ತಿದೆ. ಬಸ್ ಮತ್ತು ಚಾಲಕರು ಖಾಸಗಿಯವರಾಗಿದ್ದು, ಕಂಡಕ್ಟರ್ ನಮ್ಮವರಾಗಿರುತ್ತಾರೆ. ಬೆಳಗಾವಿಯ 8 ಗ್ರಾಮಗಳಿಗೆ ಬಸ್ ಸೇವೆ ಇಲ್ಲದ ಬಗ್ಗೆ ಪ್ರತಿಕ್ರಿಯಿಸಿದ ಅವರು ಇಕ್ಕಟ್ಟಿನ ರಸ್ತೆಗಳು ಇದ್ದಲ್ಲಿ ಬಸ್ ಸೇವೆ ಇಲ್ಲ. ಬೊಮ್ಮಾಯಿ ಅವರು ಸಾರಿಗೆ ನೌಕರರ 38 ತಿಂಗಳ ವೇತನವನ್ನು ಬಾಕಿ ಉಳಿಸಿದ್ದು, 26 ತಿಂಗಳ ವೇತನವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದರು.
