ರಾಮದುರ್ಗ ತಾಲೂಕಿನ ಪಡಕೋಟಗಲ್ಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ಎಣಿಕೆ ವೇಳೆ ವಿಚಿತ್ರ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಭಕ್ತನೊಬ್ಬ “ಸ್ವಾಮಿ, ನನ್ನನ್ನು ಒಬ್ಬ ಹುಡುಗಿಯಿಂದ ಕಾಪಾಡಿ” ಎಂದು ರಾಯರಿಗೆ ಬರೆದಿರುವ ಭಾವನಾತ್ಮಕ ಮನವಿ ಪತ್ರವೊಂದು ಹುಂಡಿಯಲ್ಲಿ ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಸಾಮಾನ್ಯವಾಗಿ ದೇವಸ್ಥಾನದ ಹುಂಡಿಗಳಲ್ಲಿ ಭಕ್ತರು ಉದ್ಯೋಗ, ಮದುವೆ, ಆರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ದೇವರಿಗೆ ಪತ್ರ ಬರೆದು ಹಾಕುವುದು ಸಹಜ. ಆದರೆ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪಡಕೋಟಗಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದ ವೇಳೆ ಅಪರಿಚಿತ ಭಕ್ತನೊಬ್ಬ ಬರೆದ ವಿಚಿತ್ರ ಪತ್ರ ಸಿಬ್ಬಂದಿಗೆ ಸಿಕ್ಕಿದೆ. ಪತ್ರದಲ್ಲಿ ತನ್ನ ಹೆಸರು ಹಾಗೂ ವಿಳಾಸವನ್ನು ಗೌಪ್ಯವಾಗಿಟ್ಟಿರುವ ಆ ವ್ಯಕ್ತಿ, “ಸ್ವಾಮೀ, ನನ್ನನ್ನು ಒಬ್ಬ ಹುಡುಗಿಯಿಂದ ಕಾಪಾಡಿ” ಎಂದು ಭಾವನಾತ್ಮಕವಾಗಿ ರಾಯರಲ್ಲಿ ಪ್ರಾರ್ಥಿಸಿಕೊಂಡಿದ್ದಾನೆ. ಈ ಅಪರೂಪದ ಹಾಗೂ ತಮಾಷೆಯ ಪತ್ರವನ್ನು ಕಂಡು ಮಠದ ಸಿಬ್ಬಂದಿ ಹಾಗೂ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಈ ಪತ್ರದ ಸುದ್ದಿ ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

