ಬೆಳಗಾವಿಯ ಗಣೇಶಪುರ ಮತ್ತು ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿ ಸೂಕ್ತ ಬಸ್ ಸಂಪರ್ಕವಿಲ್ಲದೆ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯನ್ನು ತಪ್ಪಿಸಲು NWKSRTC ಉಪಾಧ್ಯಕ್ಷ ಸುನಿಲ್ ಹನುಮಣ್ಣನವರ್ ಅವರಿಗೆ ಮಲ್ಲೇಶ್ ಚೌಗುಲೆ ಮನವಿ ಸಲ್ಲಿಸಿದ್ದಾರೆ.

ಬೆಳಗಾವಿಯ ಗಣೇಶಪುರ ಹಾಗೂ ಮಹಾಲಕ್ಷ್ಮಿ ಲೇಔಟ್ ಭಾಗದಲ್ಲಿ ಸಾರ್ವಜನಿಕ ಸಾರಿಗೆ ಕೊರತೆಯಿಂದ ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಪ್ರತಿದಿನ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಮಲ್ಲೇಶ್ ಚೌಗುಲೆ ಹಾಗೂ ಸ್ಥಳೀಯ ಗ್ರಾಮಸ್ಥರು NWKSRTC ಉಪಾಧ್ಯಕ್ಷ ಸುನಿಲ್ ಹನುಮಣ್ಣನವರ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಮಳೆಗಾಲದ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಗಣೇಶಪುರದಿಂದ ಸಿಬಿಟಿಗೆ (ಬೆಳಗಾವಿ ಸೆಂಟ್ರಲ್ ಬಸ್ ಟರ್ಮಿನಸ್) ಬಸ್ ಸೇವೆಯನ್ನು ಪುನರಾರಂಭಿಸಬೇಕು ಹಾಗೂ ಬೆಳಿಗ್ಗೆ ೮ ರಿಂದ ೧೧ ಮತ್ತು ಸಂಜೆ ೩ ರಿಂದ ೭ ರವರೆಗೆ ನಿಯಮಿತವಾಗಿ ಬಸ್ ಸಂಚಾರ ಕಲ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿಯನ್ನು ಸ್ವೀಕರಿಸಿ ಮಾತನಾಡಿದ NWKSRTC ಉಪಾಧ್ಯಕ್ಷ ಸುನಿಲ್ ಹನುಮಣ್ಣನವರ್, ಗಣೇಶಪುರದ ನಿವಾಸಿಗಳ ಬೇಡಿಕೆಯಂತೆ ಗಣೇಶಪುರದಿಂದ ಮಹಾಲಕ್ಷ್ಮಿ ಲೇಔಟ್ಗೆ ನೂತನ ಬಸ್ ಸೇವೆಯನ್ನು ಪ್ರಾರಂಭಿಸುವ ಕುರಿತು ಶೀಘ್ರವೇ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಅಗತ್ಯ ಪರಿಶೀಲನೆಗಳನ್ನು ಪೂರ್ಣಗೊಳಿಸಿ ಆದಷ್ಟು ಬೇಗ ನೂತನ ಬಸ್ ಸೇವೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಈ ಹೊಸ ಬಸ್ ಸಂಚಾರ ಆರಂಭಗೊಂಡರೆ ಖಾಸಗಿ ವಾಹನಗಳ ಮೇಲಿನ ಅವಲಂಬನೆ ಕಡಿಮೆಯಾಗಿ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
