hubbali

ರೈತರಿಗೆ ತಕ್ಷಣ ಪರಿಹಾರ ನೀಡಿ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹ

Share

ಹಗಲು-ರಾತ್ರಿ ಎನ್ನದೇ ಶ್ರಮಪಟ್ಟು ಬೆಳೆ ಬೆಳೆದ ರೈತರಿಂದ ಹೆಸರುಕಾಳು ಖರೀದಿಸಿ, ಹಣ ಪಾವತಿಸದೇ ಅವರನ್ನು ಸಂಕಷ್ಟಕ್ಕೆ ತಳ್ಳಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಸರಿಸಿದ್ದಂತೆ ಈ ಪ್ರಕರಣವನ್ನೂ “ವಿಶೇಷ ಪ್ರಕರಣ” ಎಂದು ಪರಿಗಣಿಸಿ, ರೈತರಿಗೆ ತಕ್ಷಣ ಪರಿಹಾರ ಹಾಗೂ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ಹುಬ್ಬಳ್ಳಿಯ ವಿಕಾಸನಗರದಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಪ್ರಾದೇಶಿಕ ಕಚೇರಿ ಎದುರು ಕಳೆದ 16 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಳ್ಳ, ಬ್ಯಾಹಟ್ಟಿ, ಹೆಬಸೂರು ಹಾಗೂ ಕಿರೇಸೂರ ಗ್ರಾಮಗಳ ರೈತರಿಂದ ಸುಮಾರು 991 ಕ್ವಿಂಟಾಲ್ ಹೆಸರುಕಾಳು ಖರೀದಿಸಲಾಗಿದ್ದರೂ, ಅದರ ಹಣವನ್ನು ಸರ್ಕಾರ ಇನ್ನೂ ಪಾವತಿಸಿಲ್ಲ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

“ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನೂ ಸಚಿವನಾಗಿದ್ದೆ. ಆಗ ಬಾಗಲಕೋಟೆ, ಹುನಗುಂದ ಹಾಗೂ ಇಳಕಲ್ ಭಾಗಗಳಲ್ಲಿ ಇದೇ ರೀತಿಯ ಸಮಸ್ಯೆ ಎದುರಾದಾಗ, ಸರ್ಕಾರ ಅದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸುಮಾರು ₹90 ಲಕ್ಷ ಪರಿಹಾರ ನೀಡಿತ್ತು. ಈಗಲೂ ಅದೇ ಮಾದರಿಯಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಬಾಕಿ ಇರುವ ₹87 ಲಕ್ಷವನ್ನು ತಕ್ಷಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.

ರೈತರಿಗೆ ನೀಡಬೇಕಿರುವ ₹87 ಲಕ್ಷ ಹಣವನ್ನೂ ಪಾವತಿಸಲು ಸಾಧ್ಯವಾಗದಷ್ಟು ಸರ್ಕಾರ ದಿವಾಳಿಯಾಗಿದೆಯೇ ಎಂದು ಪ್ರಶ್ನಿಸಿದ ಅವರು, ನಾಲ್ಕು ಗ್ರಾಮಗಳ ರೈತರ ನ್ಯಾಯಯುತ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ರೈತರಿಗೆ ನ್ಯಾಯ ಸಿಗುವವರೆಗೆ ಅವರ ಹೋರಾಟಕ್ಕೆ ತಾವು ಸಂಪೂರ್ಣ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

Tags:

error: Content is protected !!