ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಮಧ್ಯ ರಸ್ತೆಯಲ್ಲೇ ಅಡ್ಡಗಟ್ಟಿ ಅಪಹರಿಸಿ, ಶೆಡ್ನಲ್ಲಿ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ನಗರದ ದೇಶಪಾಂಡೆನಗರ ಮತ್ತು ಅಶೋಕ್ನಗರ ನಡುವಿನ ಸೇತುವೆ ಸಮೀಪ ಕೆಲಸಕ್ಕೆ ತೆರಳುತ್ತಿದ್ದ ತೌಫಿಕ್ ಹೊರಕೇರಿ ಎಂಬ ಯುವಕನನ್ನು ದುಷ್ಕರ್ಮಿಗಳ ಗುಂಪು ಏಕಾಏಕಿ ಅಡ್ಡಗಟ್ಟಿದೆ. ಬಳಿಕ ಆತನನ್ನು ಬಲವಂತವಾಗಿ ಮಂಟೂರು ರಸ್ತೆಯ ಮೌಲಾಲಿ ದರ್ಗಾ ಸಮೀಪಕ್ಕೆ ಕರೆದೊಯ್ದು, ಅಲ್ಲಿನ ಶೆಡ್ನಲ್ಲಿ ಅಮಾನುಷವಾಗಿ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಹಲ್ಲೆಯಲ್ಲಿ ಜಿದ್ದಿ ಮಲ್ಲಿಕ್ ಹಾಗೂ ಆಕಾಶ್ ನೇತೃತ್ವದ ತಂಡ ಭಾಗಿಯಾಗಿತ್ತು ಎಂದು ಗಾಯಾಳು ತೌಫಿಕ್ ಆರೋಪಿಸಿದ್ದಾನೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.
ತೀವ್ರವಾಗಿ ಗಾಯಗೊಂಡ ತೌಫಿಕ್ನನ್ನು ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆ ಅಶೋಕ್ನಗರ ಹಾಗೂ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
ಪೊಲೀಸರ ತನಿಖೆಯ ಬಳಿಕ ಘಟನೆಯ ನಿಖರ ಕಾರಣ ಹಾಗೂ ವಾಸ್ತವಾಂಶಗಳು ಹೊರಬೀಳಬೇಕಿದೆ.
