ನೇಪಾಳದಲ್ಲಿ ಭೀಕರವಾಗಿ ಹತ್ಯೆಗೀಡಾಗಿದ್ದ ಖಾನಾಪುರದ ಯುವಕ ಸಾಹೀಲ್ ಮೋಮೀನ ಅವರ ಪಾರ್ಥಿವ ಶರೀರ ಕೊನೆಗೂ ಸ್ವಗ್ರಾಮಕ್ಕೆ ತಲುಪಿದೆ. ಗೋವಾ ವಿಮಾನ ನಿಲ್ದಾಣದ ಮೂಲಕ ತರಲಾದ ಮೃತರ ದೇಹಕ್ಕೆ ಇಂದು ಬೆಳಗ್ಗೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಖಾನಾಪುರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ನೇಪಾಳದಲ್ಲಿ ಹತ್ಯೆಯಾಗಿದ್ದ ಖಾನಾಪುರದ ಯುವಕ ಸಾಹೀಲ್ ಮೋಮೀನ ಅವರ ಪಾರ್ಥಿವ ಶರೀರವು ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಗೋವಾ ವಿಮಾನ ನಿಲ್ದಾಣಕ್ಕೆ ಬಂದು ತಲುಪಿತ್ತು. ಅಲ್ಲಿಂದ ಖಾನಾಪುರದ ಯುವಕರ ಪಡೆಯಾದ ಆಶೀಫ ಧಫೇದಾರ, ಮಲಿಕ್ ನಾಯಿಕ, ರಬ್ಬಾನಿ ಬೇಪಾರಿ, ಇಸಾಕ್ ಖಾನ್ ಪಠಾಣ್, ಅಜೀಜ್ ಜಮಖಂಡಿ, ಯಾಸೀನ್ ದಫೇದಾರ ಹಾಗೂ ಶೈಬಾಜಾ ಬಸ್ತವಾಡಕರ ಸೇರಿದಂತೆ ಹಲವರು ಆಂಬ್ಯುಲೆನ್ಸ್ ಮೂಲಕ ನಿನ್ನೆ ತಡರಾತ್ರಿ 3 ಗಂಟೆಗೆ ಶವವನ್ನು ಖಾನಾಪುರಕ್ಕೆ ತಂದರು. ಇಂದು ಬೆಳಗ್ಗೆ 9 ಗಂಟೆಗೆ ಖಾನಾಪುರದ ಸ್ಥಳೀಯ ಕಬ್ರಸ್ಥಾನದಲ್ಲಿ ಮೃತರ ಅಂತ್ಯಕ್ರಿಯೆ ಜರುಗಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಲು ಅಪಾರ ಸಂಖ್ಯೆಯ ಬಂಧು-ಬಳಗದವರು ಹಾಗೂ ಸಾರ್ವಜನಿಕರು ಭಾಗಿಯಾಗಿ ಕಣ್ಣೀರಿನ ವಿದಾಯ ಹೇಳಿದರು.
