ಬಳ್ಳಾರಿ ಜಿಲ್ಲೆಯಲ್ಲಿ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯ ಪರಿಶೀಲನೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ತಂಡ ಇಂದು ಪ್ರವಾಸ ಕೈಗೊಂಡಿದೆ. ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿರುವ ತಂಡ, ಬರದ ಸದ್ಯದ ಸ್ಥಿತಿಗತಿಯನ್ನು ಖುದ್ದು ಪರಿಶೀಲಿಸಿ ರೈತರ ಅಳಲನ್ನು ಆಲಿಸಿದೆ.


ರಾಜ್ಯದಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ಭೀಕರ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಪ್ರಮುಖ ನಾಯಕರ ತಂಡ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿದೆ. ಪ್ರವಾಸದ ಭಾಗವಾಗಿ ಜಿಲ್ಲೆಯ ಸಿಡಗಿನಮೋಳ ಹಾಗೂ ಕಾರೇಕಲ್ ಗ್ರಾಮಗಳಿಗೆ ತೆರಳಿದ ತಂಡವು, ಬೆಳೆ ಹಾನಿ ಮತ್ತು ನೀರಿನ ಅಭಾವದಿಂದ ಕಂಗೆಟ್ಟಿರುವ ಗ್ರಾಮೀಣ ಪ್ರದೇಶದ ಬರದ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿತು.

ಇದೇ ವೇಳೆ ಸ್ಥಳೀಯ ರೈತರೊಂದಿಗೆ ನೇರ ಸಂವಾದ ನಡೆಸಿದ ಆರ್. ಅಶೋಕ್ ಪಡೆಯು, ಬೆಳೆ ನಷ್ಟ, ಸಾಲದ ಸುಳಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸಿತು. ವಿಪಕ್ಷ ನಾಯಕರ ಈ ಬರ ಅಧ್ಯಯನ ಪ್ರವಾಸದಲ್ಲಿ ಶಾಸಕರಾದ ಭೈರತಿ ಬಸವರಾಜ್, ಬಿ.ಪಿ. ಹರೀಶ್, ಕೃಷ್ಣಾ ನಾಯ್ಕ್ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸಾಥ್ ನೀಡಿ, ರೈತರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.


