ಮದ್ಯಪಾನ ಮಾಡಲು ಬಂದಿದ್ದ ಗ್ರಾಹಕನ ಮೇಲೆ ಬಾರ್ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನಗರದ ರಾಮದೇವ್ ಹೋಟೆಲ್ ಬಳಿ ನಡೆದಿದೆ. ಮಾತಿಗೆ ಮಾತು ಬೆಳೆದು ಗ್ರಾಹಕನ ತಲೆ ಒಡೆದಿರುವ ಈ ಘಟನೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ: ನಗರದ ರಾಮದೇವ್ ಹೊಟೇಲ್ ಹತ್ತಿರವಿರುವ ಶರಾವತಿ ಬಾರ್ಗೆ ನಿನ್ನೆ ರಾತ್ರಿ ಮದ್ಯಪಾನ ಮಾಡಲು ಬಂದಿದ್ದ ಯುವಕನೊಬ್ಬನ ಮೇಲೆ ಬಾರ್ ಸಿಬ್ಬಂದಿ ಮತ್ತು ಸ್ಥಳೀಯರು ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಮದ್ಯ ಸೇವನೆಯ ವೇಳೆ ಗ್ರಾಹಕ ಹಾಗೂ ಬಾರ್ ಮಾಲೀಕನ ನಡುವೆ ವಾಗ್ವಾದ ನಡೆದಿದ್ದು, ಗ್ರಾಹಕನು ಮಾಲೀಕನಿಗೆ ಬೈದಿದ್ದಾನೆ ಎಂಬ ಕಾರಣಕ್ಕೆ ಕೆರಳಿದ ಸಿಬ್ಬಂದಿ ಆತನ ಮೇಲೆ ಮುಗಿಬಿದ್ದಿದ್ದಾರೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಬಾರ್ ಸಿಬ್ಬಂದಿ ಯುವಕನ ತಲೆಗೆ ಬಲವಾಗಿ ಹೊಡೆದಿದ್ದು, ತೀವ್ರ ರಕ್ತಸ್ರಾವವಾಗಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ನಡುರಸ್ತೆಯಲ್ಲೇ ಯುವಕನ ಮೇಲೆ ಈ ರೀತಿ ಮಾರಣಾಂತಿಕ ಹಲ್ಲೆ ನಡೆಸಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆ ಸಂಬಂಧ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
