ಖಾನಾಪುರ ತಾಲೂಕಿನ ಶಿವಠಾಣದಲ್ಲಿ ಗ್ರಾಮಸ್ಥರ ಅಪಾರ ಶ್ರದ್ಧೆ ಹಾಗೂ ಶ್ರಮದ ಫಲವಾಗಿ ನೂತನವಾಗಿ ನಿರ್ಮಾಣಗೊಂಡ ಶ್ರೀ ವಿಠ್ಠಲ-ರುಕ್ಮಿಣಿ ದೇವಾಲಯವು ಇಂದು ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ಶಾಸಕ ವಿಠ್ಠಲ ಹಲಗೇಕರ ಅವರು ಮಂದಿರದ ಲೋಕಾರ್ಪಣೆ ನೆರವೇರಿಸಿ, ಆಧ್ಯಾತ್ಮಿಕತೆಯೇ ನೆಮ್ಮದಿಯ ದಾರಿ ಎಂಬ ಸಂದೇಶ ಸಾರಿದರು.


ಶಿವಠಾಣ ಗ್ರಾಮದ ಭಕ್ತಿಯ ಸಂಕೇತವಾಗಿ ತಲೆ ಎತ್ತಿರುವ ಶ್ರೀ ವಿಠ್ಠಲ-ರುಕ್ಮಿಣಿ ಮಂದಿರದ ಉದ್ಘಾಟನಾ ಸಮಾರಂಭವು ಸಡಗರದಿಂದ ನೆರವೇರಿತು. ಶಾಸಕ ವಿಠ್ಠಲ ಹಲಗೇಕರ ಹಾಗೂ ಅವರ ಧರ್ಮಪತ್ನಿ ರುಕ್ಮಿಣಿ ಹಲಗೇಕರ ಅವರು ದೀಪ ಬೆಳಗುವ ಮೂಲಕ ಮಂದಿರವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕರು, “ಗ್ರಾಮಸ್ಥರ ಪ್ರೀತಿ ಮತ್ತು ಭಕ್ತಿಯ ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಅದೃಷ್ಟ ನನಗೆ ಸಿಕ್ಕಿದೆ. ದೇವಸ್ಥಾನಗಳು ಕೇವಲ ಕಟ್ಟಡಗಳಲ್ಲ, ಅವು ನಮ್ಮ ಸಂಸ್ಕೃತಿಯ ಮತ್ತು ಐಕ್ಯತೆಯ ಕೇಂದ್ರಗಳು” ಎಂದು ಹರ್ಷ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಆರೋಗ್ಯದ ಕುರಿತು ವಿಶೇಷ ಕಾಳಜಿ ವ್ಯಕ್ತಪಡಿಸಿದ ಶಾಸಕರು, ಇಂದಿನ ಒತ್ತಡದ ಜೀವನದಲ್ಲಿ ಬಿಪಿ ಮತ್ತು ಸಕ್ಕರೆ ಕಾಯಿಲೆಗಳ ಅಬ್ಬರ ಹೆಚ್ಚಾಗುತ್ತಿದ್ದು, ಇವುಗಳಿಂದ ಪಾರಾಗಲು ಭಕ್ತಿ ಮಾರ್ಗವು ಮಾನಸಿಕ ಶಾಂತಿಯನ್ನು ನೀಡುತ್ತದೆ ಎಂದರು. ಇದೇ ವೇಳೆ ಮಂದಿರದ ಅರ್ಚಕ ಕೇದಾರಿ ಈಶ್ವರ್ ಮಿರಾಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ವೈಯಕ್ತಿಕ ಆದಾಯದಲ್ಲಿ 1 ಲಕ್ಷ ರೂಪಾಯಿಗಳನ್ನು ದೇವಸ್ಥಾನದ ನಿರ್ಮಾಣಕ್ಕೆ ಕೊಡುಗೆಯಾಗಿ ನೀಡಿದ್ದು ನನ್ನ ಭಾಗ್ಯ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.
