ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣ ಕಾರ್ಯವು ಜರುಗಲಿದೆ. ಪರಿಷ್ಕರಣೆ ಕಾರ್ಯವು ಸುವ್ಯವಸ್ಥಿತವಾಗಿ ಮತ್ತು ಯಶಸ್ವಿಯಾಗಿ ಜರುಗಿಸಲು ಎಲ್ಲ ರಾಜಕೀಯ ಪಕ್ಷಗಳ ಸಹಕಾರವು ಜಿಲ್ಲಾಡಳಿತಕ್ಕೆ ಅಗತ್ಯವಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.


ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 (Special Intensive Revision) ಕೈಗೊಳ್ಳುವ ಕುರಿತು ಭಾರತ ಚುನಾವಣಾ ಆಯೋಗ ಹೊರಡಿಸಿರುವ ವೇಳಾ ಪಟ್ಟಿಯ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದರು ಅವರು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು 2002-04 ರ ನಂತರ ಅಂದರೆ 20 ವರ್ಷಗಳ ನಂತರ ಜರಗುತ್ತಿದೆ. ಚುನಾವಣೆಗಳಿಗಾಗಿ ಮತದಾರರ ಪಟ್ಟಿಯ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಅವಶ್ಯವಾಗಿರುತ್ತದೆ ಎಂದರು.

ಮತದಾರರ ಪಟ್ಟಿಗಳಲ್ಲಿನ ಮತದಾರರ ಗಮನಾರ್ಹ ಬದಲಾವಣೆಗಳು. ಪುನಾವರ್ತಿತ ನಮೂದುಗಳು, ತ್ವರಿತ ನಗರೀಕರಣ ಮತ್ತು ಶಿಕ್ಷಣ ಹಾಗೂ ಜೀವನೋಪಾಯಕಕ್ಕಾಗಿ ವಲಸೆಯಾಗಿರುವ ಸಾಧ್ಯತೆ ಇರುತ್ತದೆ. ಮರಣ, ಪುನರಾವರ್ತನೆಯಾದ ಮತದಾರರ ಹೆಸರುಗಳು, ವಿದೇಶಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು. ಮತ್ತು ಮತಗಟ್ಟೆ ಮಟ್ಟದಲ್ಲಿ ನೇಮಿಸಿರುವ ಬಿಎಲ್ಎ ಗಳು ಸಕ್ರೀಯವಾಗಿ ತೊಡಗಿಸಿಕೊಂಡು, ಬಿಎಲ್ಓ ಗಳಿಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗ ಸ್ನೇಹಲ್ ಆರ್. ಅವರು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ಮತದಾರರ ಮ್ಯಾಪಿಂಗ್ ಕಾರ್ಯವು ಪ್ರಗತಿಯಲ್ಲಿದ್ದು, ಬಿಎಲ್ಎ ಗಳು ಪೂರ್ಣ ಪ್ರಮಾಣದ ಪ್ರಗತಿ ಸಾಧಿಸಲು ಬಿಎಲ್ಓ ಗಳಿಗೆ ಸಹಕರಿಸಬೇಕು ಎಂದು ತಿಳಿಸಿದರು. ಇನ್ನೂ ಸಭೆಯಲ್ಲಿ ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವೇಳಾಪಟ್ಟಿಯನ್ನು ವಿವರಿಸಿದರು.
ಸಭೆಯಲ್ಲಿ ಎಡಿಸಿ ಗೀತಾ ಸಿ.ಡಿ., ಎಲ್ಲ ತಾಲೂಕುಗಳ ತಹಶೀಲ್ದಾರರು, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಪ್ರಕಾಶ ಹಳಿಯಾಳ, ಭಾರತೀಯ ಜನತಾ ಪಕ್ಷದ ಸಿದ್ದು ಕಲ್ಯಾಣಶೆಟ್ಟಿ, ಶಂಕರ ಮುಗದ, ಜ್ಯಾತಾತೀತ ಜನತಾದಳದ ಪಕ್ಷದ ದೇವರಾಜ ಕಂಬಳಿ, ಮಂಜುನಾಥ ಎಲ್.ಹಗೇದಾರ, ಜೆಡಿಯು ಪಕ್ಷ ಶ್ರೀಶೈಲಗೌಡ ಕಮತರ, ಬಹುಜನ ಸಮಾಜ ಪಕ್ಷದ ನಿಂಗಪ್ಪ.ರು.ಕುಡುವಕ್ಕಲಿಗರ ಹಾಗೂ ಆಮ್ ಆದ್ಮಿ ಪಕ್ಷದ ಪ್ರತಿನಿಧಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
