Belagavi

ಲಿಂಗರಾಜ್ ಕಾಲೇಜಿಗೆ ಡಿಸಿ ಎಂ.ಜಿ.ಹಿರೇಮಠ ಭೇಟಿ: ಯಾವ ವಿದ್ಯಾರ್ಥಿಯನ್ನು ಗೇಟ್‍ನಲ್ಲಿ ತಡಿಬಾರದು: ಮನವಲಿಸಲು ಸೂಚನೆ

Share

ಬೆಳಗಾವಿ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಯಾರಾದ್ರೂ ಕಾಲೇಜಿಗೆ ಧಾರ್ಮಿಕ ವಸ್ತ್ರಗಳನ್ನು ಧರಿಸಿ ಬಂದರೆ ಅಂತವರನ್ನು ಗೇಟ್‍ಗಳಲ್ಲಿ, ಆವರಣದಲ್ಲಿ ಯಾವುದೇ ಕಾರಣಕ್ಕೂ ತಡೆಯಬಾರದು. ಅವರ ಮನವಲಿಸಿ ತರಗತಿಗಳಲ್ಲಿಯೇ ಅವರ ಡ್ರೆಸ್‍ಗಳನ್ನು ತೆಗೆಸಬೇಕು ಎಂದು ಎಲ್ಲಾ ಕಾಲೇಜುಗಳಿಗೆ ಸ್ಪಷ್ಟ ಸಂದೇಶ ಕೊಟ್ಟಿದ್ದೇವೆ ಎಂದು ಡಿಸಿ ಮಹಾಂತೇಶ ಹಿರೇಮಠ ತಿಳಿಸಿದರು.

ನಿನ್ನೆ ಹಿಜಾಬ್ ಕಳಚುವಂತೆ ಹೇಳಿದ್ದಕ್ಕೆ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು ಕ್ಲಾಸ್ ಬಹಿಷ್ಕರಿಸಿ, ಕಿರಿಕ್ ಮಾಡಿದ್ದರು. ಹೀಗಾಗಿ ಗುರುವಾರ ಲಿಂಗರಾಜ್ ಕಾಲೇಜಿಗೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಇದೊಂದು ಸಹಜ ಪ್ರಕ್ರಿಯೆ, ಎಲ್ಲರೂ ಮಕ್ಕಳಿಗೆ ಒಳಗಡೆ ಹೋಗಲು ಅನುಕೂಲ ಮಾಡಿಕೊಡಬೇಕು. ಯಾರೂ ಗೇಟ್ ಹತ್ತಿರ ಇರಬಾರದು. ಪೊಲೀಸ್ ಸಿಬ್ಬಂದಿ ಮಾತ್ರ ಇರುತ್ತಾರೆ, ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಬೇರೆ ಯಾವುದೇ ವ್ಯಕ್ತಿ ಒಳಗೆ ಹೋಗಬಾರದು ಎಂದು ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲಿಯೇ ನಿಯಮ ಉಲ್ಲಂಘನೆ ಆದ್ರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಇನ್ನು ನಿನ್ನೆ ಲಿಂಗರಾಜ್ ಕಾಲೇಜಿನಲ್ಲಿ ತರಗತಿ ಬಹಿಷ್ಕರಿಸಿದ್ದ ಮೂವರು ವಿದ್ಯಾರ್ಥಿನಿಯರ ಮನವಲಿಸುತ್ತೇವೆ. ಅವರು ಯಾವುದೇ ಕಾರಣಕ್ಕೂ ಆ ರೀತಿ ಮಾಡಬಾರದು. ಇವತ್ತಿನಿಂದ ತರಗತಿಗೆ ಹಾಜರಾಗಲು ಅವರಿಗೆ ಅವಕಾಶ ನೀಡುವಂತೆ ತಿಳಿಸುತ್ತೇವೆ ಎಂದರು.

ಕುಡಚಿಯಲ್ಲಿ 38 ವಿದ್ಯಾರ್ಥಿನಿಯರು ತರಗತಿ ಬಹಿಷ್ಕಾರ ಮಾಡಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು ರಾಯಬಾಗ ತಹಶೀಲ್ದಾರ್ ಹಾಗೂ ಎಸಿ ಜೊತೆಗೂ ಮಾತನಾಡಿದ್ದೇನೆ. ಯಾರನ್ನೂ ಕೂಡ ಗೇಟ್ ಬಳಿ, ಆವರಣದಲ್ಲಿ ತಡೆಹಿಡಿಯಬಾರದು. ಮಕ್ಕಳನ್ನು ಕ್ಲಾಸ್ ರೂಮ್‍ಗೆ ಬಿಡಬೇಕು. ಕ್ಲಾಸ್ ರೂಮ್‍ನಲ್ಲಿಯೇ ವಿದ್ಯಾರ್ಥಿಗಳನ್ನು ಮನವಲಿಸಬೇಕು. ಅದನ್ನು ಬಿಟ್ಟು ಬೇರೆ ಏನೂ ಮಾಡುವಂತಿಲ್ಲ. ಇನ್ನು ಪೋಷಕರಿಗೆ ಯಾವುದೇ ಕಾರಣಕ್ಕೂ ಕಾಲೇಜು ಒಳಗೆ ಪ್ರವೇಶ ಇಲ್ಲ. ಯಾರೂ ಪ್ರಚೋದನೆ ಮಾಡುವ ಕೆಲಸ ಮಾಡಬಾರದು. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು.

ಒಟ್ಟಿನಲ್ಲಿ ಬೆಳಗಾವಿಯ ಎಲ್ಲ ಕಾಲೇಜುಗಳ ಮುಂಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೋರ್ಟ ನಿಯಮ ಉಲ್ಲಂಘಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

 

 

Tags:

error: Content is protected !!