ಅಭಿವೃದ್ಧಿ ಕಂಡ ಹೊಸ ರಸ್ತೆಯು ಕೆಲವೇ ತಿಂಗಳುಗಳಲ್ಲಿ ಮರಳಿ ಗುಂಡಿಮಯವಾಗುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಓವರ್ಲೋಡ್ ಲಾರಿಗಳ ಅಕ್ರಮ ಸಂಚಾರದ ವಿರುದ್ಧ ಸಿಡಿದೆದ್ದ ಚಿಕ್ಕಬಾಗೇವಾಡಿ ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹಲವು ವರ್ಷಗಳ ಬಳಿಕ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಇತ್ತೀಚೆಗಷ್ಟೇ ನವೀಕರಣಗೊಂಡಿತ್ತು. ಆದರೆ ಇದೀಗ ದಿನನಿತ್ಯ ಈ ಮಾರ್ಗದಲ್ಲಿ ಹಾಯುಹೋಗುವ ನೂರಾರು ಓವರ್ಲೋಡ್ ಲಾರಿಗಳಿಂದಾಗಿ ಹೊಸ ರಸ್ತೆಯು ಮತ್ತೆ ಹಳ್ಳ-ಕೊಳ್ಳಗಳಿಂದ ಕೂಡುತ್ತಿದ್ದು, ತೀವ್ರವಾಗಿ ಹಾಳಾಗುವ ಆತಂಕ ಎದುರಾಗಿದೆ.
ಹೊಸದಾಗಿ ನಿರ್ಮಾಣವಾದ ರಸ್ತೆಗೆ ಲಾರಿಗಳ ಭರಾಟೆಯಿಂದ ಧಕ್ಕೆಯಾಗುತ್ತಿರುವುದನ್ನು ಖಂಡಿಸಿ ಹಾಗೂ ದೂಳು ಮತ್ತು ಗುಂಡಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ವಿರೋಧಿಸಿ ಗ್ರಾಮಸ್ಥರು ಮತ್ತು ರೈತರು ಇಂದು ಒಗ್ಗೂಡಿ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ರಸ್ತೆಯಲ್ಲಿನ ಓವರ್ಲೋಡ್ ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ತಡೆಯಬೇಕೆಂದು ಆಕ್ರೋಶಭರಿತ ಗ್ರಾಮಸ್ಥರು ಬಲವಾಗಿ ಒತ್ತಾಯಿಸಿದ್ದಾರೆ.
ಇನ್ನುಮುಂದೆಯಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಸಮಸ್ಯೆಯ ಗಂಭೀರತೆಯನ್ನುಅರಿತು ಸ್ಥಳಕ್ಕೆ ಭೇಟಿ ನೀಡಿ ಕಠಿಣ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
