ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಅರ್ತಿಯ ಮೇಲೆ ನಿಯಮಿತವಾಗಿ ವಿಚಾರಣೆ ನಡೆಸಿ ಅಂತಿಮ ತೀರ್ಪು ಶೀಘ್ರವಾಗಿ ಹೊರಬೀಳುವಂತೆ ಮಹಾರಾಷ್ಟ್ರ ಸರ್ಕಾರವು ಗಂಭೀರವಾಗಿ ಕಾನೂನು ಹೋರಾಟ ನಡೆಸಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬಲವಾಗಿ ಆಗ್ರಹಿಸಿ ಮಹಾರಾಷ್ಟ್ರ ಸಿಎಂಗೆ ಮನವಿ ಸಲ್ಲಿಸಿದೆ.
ಈ ಕುರಿತು ಎಂ.ಇ.ಎಸ್ ನಿಯೋಗವು ಮುಂಬೈನ ಮಲ್ಬಾರ್ ಹಿಲ್ನಲ್ಲಿರುವ ‘ಸಹ್ಯಾದ್ರಿ ಅತಿಥಿಗೃಹ’ದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸವಿಸ್ತಾರವಾದ ಮನವಿ ಪತ್ರವನ್ನು ಸಲ್ಲಿಸಿತು.
ಈ ನಿಯೋಗದಲ್ಲಿ ಮ.ಎ.ಸಮಿತಿಯ ಪ್ರಮುಖ ನಾಯಕರಾದ ರಮಾಕಾಂತ್ ಕೊಂಡೂಸ್ಕರ್, ಯುವ ನಾಯಕ ಸಾಗರ್ ಪಾಟೀಲ್, ಗುಣವಂತ್ ಪಾಟೀಲ್, ಕಪಿಲ್ ಭೋಸ್ಲೆ, ಆನಂದ್ ಆಪ್ಟೇಕರ್, ವಿರಾಜ್ ಮುರಕುಂಬಿ, ನಂದು ಇಂದೂಲ್ಕರ್ ಹಾಗೂ ಇಚಲಕರಂಜಿಯ ಶಾಸಕ ರಾಹುಲ್ ಆವಾಡೆ ಮತ್ತು ಚಂದಗಡದ ಶಾಸಕ ಶಿವಾಜಿರಾವ್ ಪಾಟೀಲ್ ಉಪಸ್ಥಿತರಿದ್ದರು. ಗಡಿಭಾಗದ ಮರಾಠಿ ಭಾಷಿಕರ ಹಿತಾಸಕ್ತಿ ಕಾಪಾಡಲು ಸರ್ಕಾರ ಈ ವಿಷಯದಲ್ಲಿ ವಿಶೇಷ ಮುತುವರ್ಜಿ ವಹಿಸಬೇಕೆಂದು ಈ ವೇಳೆ ಒತ್ತಾಯಿಸಲಾಯಿತು.

