ಖಾನಾಪುರ ತಾಲೂಕಿನ ಬೀಡಿ ಗ್ರಾಮದ ತೆರೇಸಾ ರಾಣಿ ಬೆಳಗಾವಿಯ ಪ್ರತಿಷ್ಠಿತ ಎಸ್.ಬಿ.ಜಿ. ಆಯುರ್ವೇದ ಮಹಾವಿದ್ಯಾಲಯದಲ್ಲಿ BAMS ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆಗೆ ಪಾತ್ರರಾಗಿದ್ದಾರೆ. ತಾಲೂಕಿಗೆ ಕೀರ್ತಿ ತಂದ ಸಾಧಕಿಯನ್ನು ಕರವೇ ಖಾನಾಪುರ ತಾಲೂಕು ಘಟಕದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರೋಗ್ಯಪ್ಪ ಪಾದನಕಟ್ಟಿ ಅವರ ಸುಪುತ್ರಿ ತೆರೇಸಾ ರಾಣಿಯವರ ಈ ಸಾಧನೆಯನ್ನು ಕರವೇ ತಾಲೂಕಾಧ್ಯಕ್ಷ ಹಾಗೂ ಕೇರವಾರ PKPS ನಿರ್ದೇಶಕ ವಿಠ್ಠಲ ಹಿಂಡಲಕರ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. “ಹಿಂದುಳಿದ ತಾಲೂಕು ಎಂಬ ಹೆಸರಿದ್ದರೂ, ಅಭಿವೃದ್ಧಿಯಿಂದ ವಂಚಿತವಾದ ಖಾನಾಪುರದ ಹೆಸರು ವೈದ್ಯಕೀಯ ಕ್ಷೇತ್ರದಲ್ಲಿ ಉಜ್ವಲಗೊಳ್ಳುವಂತೆ ಮಾಡಿರುವುದು ಹೆಮ್ಮೆಯ ವಿಷಯ” ಎಂದು ಬಣ್ಣಿಸಿದ ಅವರು, ತಾಲೂಕಿನ ಇನ್ನುಳಿದ ಪ್ರತಿಭಾವಂತ ವಿದ್ಯಾರ್ಥಿಗಳೂ ಶಿಕ್ಷಣದಲ್ಲಿ ಇಂತಹ ಸಾಧನೆ ಮಾಡುವ ಮೂಲಕ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು. ಈ ಗೌರವ ಸಮಾರಂಭದಲ್ಲಿ ದಶರಥ ಜನೋಶಿ, ಬಿಷ್ಟಪ್ಪ ಬನೋಶಿ, ಪತ್ರಕರ್ತ ಶಶಿಕಾಂತ ತಳವಾರ ಸೇರಿದಂತೆ ಹಲವು ಕನ್ನಡ ಹೋರಾಟಗಾರರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
