ಬಳ್ಳಾರಿಯಲ್ಲಿ ಮಳೆಯಿಲ್ಲದೆ ಬರಗಾಲದ ಭೀಕರತೆ ತಾರಕಕ್ಕೇರಿದ್ದು, ಸಾಲ-ಸೋಲ ಮಾಡಿ ಬೆಳೆದ ಬೆಳೆಗಳು ಕಣ್ಣೆದುರೇ ಒಣಗಿ ಹೋಗುತ್ತಿರುವುದನ್ನು ಕಂಡು ಅನ್ನದಾತ ಕಂಗಾಲಾಗಿದ್ದಾನೆ. ಕಳೆದ ಎರಡು ತಿಂಗಳಿನಿಂದ ಹನಿ ಮಳೆಯೂ ಇಲ್ಲದೆ, ಬೋರ್ವೆಲ್ ನೀರು ಬತ್ತಿ ಹೋಗಿ ಹತ್ತಿ ಬೆಳೆ ಸಂಪೂರ್ಣ ಕಮರಿ ಹೋಗಿದ್ದು, ಸಂಕಷ್ಟದಲ್ಲಿರುವ ರೈತರು ಸರ್ಕಾರದ ತುರ್ತು ನೆರವಿಗೆ ಆಗ್ರಹಿಸಿದ್ದಾರೆ.


ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಬರಗಾಲದ ಭೀಕರ ರೂಪ ಬೆಳಕಿಗೆ ಬಂದಿದ್ದು, ಗ್ರಾಮದ ರೇವಣ್ಣ ಎಂಬುವರು ತಮ್ಮ ಆರೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ ಬೆಳೆ ಮಳೆಯಿಲ್ಲದೆ ಸಂಪೂರ್ಣ ಒಣಗಿ ನಾಶವಾಗುತ್ತಿದೆ. ಬೆಳೆಗಾಗಿ ಪ್ರತಿ ಎಕರೆಗೆ ಬರೋಬ್ಬರಿ 55 ಸಾವಿರ ರೂಪಾಯಿಯಂತೆ ಒಟ್ಟು 4 ಲಕ್ಷ ರೂಪಾಯಿವರೆಗೆ ಸಾಲ ಮಾಡಿ ಖರ್ಚು ಮಾಡಲಾಗಿತ್ತು. ಆದರೆ ಕಳೆದ ಎರಡು ತಿಂಗಳಿಂದ ಪ್ರದೇಶದಲ್ಲಿ ಮಳೆಯ ಸುಳಿವೇ ಇಲ್ಲದೆ ಹಾಗೂ ಇತ್ತ ಬೋರ್ವೆಲ್ನಲ್ಲೂ ನೀರು ಬತ್ತಿ ಹೋಗಿರುವುದರಿಂದ ಹತ್ತಿ ಗಿಡಗಳು ಬಿಸಿಲಿನ ಬೇಖಾರಕ್ಕೆ ಕಮರಿ ಬೂದಿಯಾಗುತ್ತಿವೆ.
ಕಣ್ಣೆದುರೇ ಒಣಗುತ್ತಿರುವ ಬೆಳೆಯನ್ನು ಕಂಡು ಕಂಗಾಲಾಗಿರುವ ರೈತ ರೇವಣ್ಣ, ಸಾಲ ಮಾಡಿ ಬೆಳೆದ ಬೆಳೆ ಕೈಗೆ ಬಾರದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಬಾರದೆ ಬೆಳೆ ಸಂಪೂರ್ಣ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ರೈತನನ್ನು ಕಾಡುತ್ತಿದ್ದು, ಸರ್ಕಾರ ತಕ್ಷಣವೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಹಾಗೂ ನೆರವು ನೀಡಬೇಕೆಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
