ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಅಕ್ರಮ ಮದ್ಯ ಸಾಗಾಟವನ್ನು ಪತ್ತೆಹಚ್ಚಿದ ಸಾರ್ವಜನಿಕರಿಗೇ ಈಗ ಹೊಸದೊಂದು ಸಂಕಷ್ಟ ಎದುರಾಗಿದೆ. ಖಚಿತ ಮಾಹಿತಿ ನೀಡಿ ಇಲಾಖೆಗೆ ನೆರವಾದ ವ್ಯಕ್ತಿಯನ್ನೇ ಸಾಕ್ಷಿಯಾಗುವಂತೆ ಅಬಕಾರಿ ಅಧಿಕಾರಿಗಳು ಒತ್ತಡ ಹೇರುತ್ತಿರುವ ಘಟನೆ ವರದಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಬೀಳಗಿ ಪಟ್ಟಣದಿಂದ ಕಂದಗಲ್ ಗ್ರಾಮದ ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಡಗಂಡಿ ಸಕ್ಕರೆ ಕಾರ್ಖಾನೆಯ ಬಳಿ ಅಧಿಕಾರಿಗಳು ವಾಹನವನ್ನು ತಡೆಯಲು ಯತ್ನಿಸಿದಾಗ, ಸಿಕ್ಕಿಬೀಳುವ ಭೀತಿಯಿಂದ ಚಾಲಕ ರಸ್ತೆ ಬದಿಗೆ ಮದ್ಯದ ಬಾಕ್ಸ್ಗಳನ್ನು ಎಸೆದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅಬಕಾರಿ ನಿರೀಕ್ಷಕ ಚನ್ನಪ್ಪ ಗರಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರಾದರೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಸಾರ್ವಜನಿಕರನ್ನೇ ಸಾಕ್ಷಿಯಾಗುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಕಾನೂನಿನ ಪ್ರಕಾರ ಮಾಹಿತಿ ನೀಡುವವರ ಹೆಸರು ಮತ್ತು ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡುವುದು ಕಡ್ಡಾಯವಾಗಿದ್ದರೂ, ಅಧಿಕಾರಿಗಳು ತಮ್ಮನ್ನೇ ಸಾಕ್ಷಿ ನಿಲ್ಲಿಸಲು ಮುಂದಾಗಿರುವುದಕ್ಕೆ ಮಾಹಿತಿದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಸಾರ್ವಜನಿಕ ಹಿತಾಸಕ್ತಿಯಿಂದ ಮಾಹಿತಿ ನೀಡಿದ್ದೇ ತಪ್ಪೇ?” ಎಂದು ಇಲಾಖೆಯ ನಡೆಯನ್ನು ಪ್ರಶ್ನಿಸಿದ್ದಾರೆ.
