ಬೆಳಗಾವಿ ಜಿಲ್ಲಾ ಪಂಚಾಯತ್ನಲ್ಲಿ ಇಂದು ಮಹತ್ವದ ನೇಮಕಾತಿ ಆದೇಶ ಪತ್ರ ವಿತರಣಾ ಸಮಾರಂಭ ಜರುಗಿದೆ. ಗ್ರಾಮ ಪಂಚಾಯತಿಗಳ ಒಟ್ಟು 62 ಅರ್ಹ ಸಿಬ್ಬಂದಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ನೇಮಕಾತಿ ಪತ್ರಗಳನ್ನು ವಿತರಿಸಿ, ಹೊಸ ಜವಾಬ್ದಾರಿಗೆ ಶುಭ ಹಾರೈಸಿದ್ದಾರೆ.


ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿಗಾರ, ಕ್ಲರ್ಕ್/ಕ್ಲರ್ಕ್ ಕಂ. ಡಾಟಾ ಎಂಟ್ರಿ ಆಪರೇಟರುಗಳ ವೃಂದದಿಂದ ಗ್ರಾಮ ಪಂಚಾಯತ್ ಗ್ರೇಡ್-2 ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಆಂತರಿಕ ನೇಮಕಾತಿ ಹೊಂದಿರುವ 62 ಸಿಬ್ಬಂದಿಗಳಿಗೆ ಸೋಮವಾರ (ಜು.13) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೇಮಕಾತಿ ಆದೇಶ ಪತ್ರಗಳನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ವಿತರಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂದೆ ಅವರು ಸದರಿ ಆಂತರಿಕ ನೇಮಕಾತಿಗಳು ಪಾರದರ್ಶಕತೆಯಿಂದ ಜರುಗಿಸಲಾಗಿದೆ. ಈ ನೇಮಕಾತಿಗಳಿಗೆ ಕಳೆದ ಎರಡು ತಿಂಗಳುಗಳಿಂದ ಪ್ರಕ್ರಿಯೆ ಜರುಗಿಸಿ ಸಂಬಂಧಿಸಿದ ಎಲ್ಲ ಸಿಬ್ಬಂದಿಗಳ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ 62 ಜನರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಮುಂಬಡ್ತಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಆಸೀಫ್ ಸೇಠ್, ವಾ.ಕ.ರ.ಸಾರಿಗೆ ಸಂಸ್ಥೆ ಉಪಾಧ್ಯಕ್ಷರಾದ ಸುನಿಲ ಹನುಮಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

