ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬುಧವಾರ ಚನ್ನಮ್ಮನ ಕಿತ್ತೂರು ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದಾರೆ. ಕಚೇರಿಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಬಯೋಮೆಟ್ರಿಕ್ ಮತ್ತು ಕಂಪ್ಯೂಟರ್ ಡಿಜಿಟಲ್ ಸಿಸ್ಟಮ್ ವ್ಯವಸ್ಥೆಯನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.


ಬೆಳಗಾವಿ ಜಿಲ್ಲಾ ಪ್ರವಾಸದ ಅಂಗವಾಗಿ ಕಿತ್ತೂರಿಗೆ ಆಗಮಿಸಿದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು, ಸ್ವಾತಂತ್ರ್ಯ ಹೋರಾಟದ ವೀರ ಮಹಿಳೆ ರಾಣಿ ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳಿಗೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ಕಿತ್ತೂರು ಪಟ್ಟಣದ ತಾಲೂಕು ದಂಡಾಧಿಕಾರಿಗಳ (ತಹಶೀಲ್ದಾರ್) ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅತಿ ಶೀಘ್ರವಾಗಿ ದಾಖಲೆಗಳನ್ನು ಒದಗಿಸಲು ಕಂಪ್ಯೂಟರ್ ಡಿಜಿಟಲ್ ಹಾಗೂ ಬಯೋಮೆಟ್ರಿಕ್ ಸಿಸ್ಟಮ್ ಪ್ರಾರಂಭಿಸಲಾಗುತ್ತಿದ್ದು, ಇದರ ಪ್ರಾಯೋಗಿಕ ಜಾರಿಯನ್ನು ವೀಕ್ಷಿಸಲು ಭೇಟಿ ನೀಡಿರುವುದಾಗಿ ಡಿಸಿಎಂ ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು. ರೆವಿನ್ಯೂ ಕಮಿಷನರ್ ಮೀನಾ, ಕಂದಾಯ ಇಲಾಖೆಯ ಪಿ.ಆರ್.ಎಸ್. ರಾಜೇಂದ್ರ ಕಠಾರಿಯಾ, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಡಿಸಿಸಿ ಬ್ಯಾಂಕ್ ಸದಸ್ಯ ನಾನಾಸಾಹೇಬ ಪಾಟೀಲ, ತಹಶೀಲ್ದಾರ್ ಕಲಗೌಡ ಪಾಟೀಲ ಹಾಗೂ ಡಿಎಸ್ಪಿ ಡಾ. ವೀರಯ್ಯ ಹಿರೇಮಠ ಸೇರಿದಂತೆ ಹಲವು ಪ್ರಮುಖರು ಉಪಮುಖ್ಯಮಂತ್ರಿಗಳ ಭೇಟಿಯ ವೇಳೆ ಸಾಥ್ ನೀಡಿದರು.

