ನಿರ್ಲಕ್ಷ್ಯಕ್ಕೊಳಗಾಗಿದ್ದ ಕಿತ್ತೂರಿನ ಐತಿಹಾಸಿಕ ರಣಗಟ್ಟಿ ಕೆರೆಗೆ ಕೊನೆಗೂ ಜೀವಕಳೆ ಬಂದಿದೆ. ಶಾಸಕ ಬಾಬಾಸಾಹೇಬ ಪಾಟೀಲ ಅವರ ವಿಶೇಷ ಆಸಕ್ತಿಯಿಂದಾಗಿ ಏತ ನೀರಾವರಿ ಯೋಜನೆಯಡಿ ಕೆರೆಗೆ ನೀರು ತುಂಬಿಸುವ ಎರಡನೇ ಹಂತದ ಕಾಮಗಾರಿಗೆ ಇಂದು ಅಧಿಕೃತ ಚಾಲನೆ ನೀಡಲಾಯಿತು.


ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಐತಿಹಾಸಿಕ ರಣಗಟ್ಟಿ ಕೆರೆಯು ಕಳೆದ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ ಹಾಳಾಗಿತ್ತು. ಈ ಹಿಂದೆ ಅನೇಕ ಜನಪ್ರತಿನಿಧಿಗಳು ಬಂದು ಹೋದರೂ ಸಹ ಕೆರೆಯ ಸ್ಥಿತಿ ಮಾತ್ರ ಸುಧಾರಿಸಿರಲಿಲ್ಲ. ಸ್ಥಳೀಯರ ಬಹುಕಾಲದ ಬೇಡಿಕೆಯಾಗಿದ್ದ ಕೆರೆ ಸ್ವಚ್ಛತೆ ಹಾಗೂ ನೀರು ತುಂಬಿಸುವ ಕಾಮಗಾರಿಗೆ ಈಗ ಕೊನೆಗೂ ಕಾಲ ಕೂಡಿ ಬಂದಿದೆ. ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ವಿಶೇಷ ಪ್ರಯತ್ನದಿಂದಾಗಿ ಏತ ನೀರಾವರಿ ಯೋಜನೆಯಡಿ ಕೆರೆಗೆ ಹೊಸ ಕಳೆ ಬಂದಿದ್ದು, ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದ ಎರಡನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಕೆರೆಗಳಿಗೆ ನೀರು ತುಂಬಿಸಿ ಅವುಗಳನ್ನು ಅಭಿವೃದ್ಧಿಪಡಿಸುವುದರಿಂದ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಕುಳ್ಳೋಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಲು ಹಳ್ಳದ ಮೇಲೆ ಸಣ್ಣ ಸೇತುವೆಯನ್ನು ಕೂಡ ನಿರ್ಮಿಸಲಾಗುವುದು. ಸರ್ಕಾರದ ಅನುದಾನ ತರಿಸುವಲ್ಲಿ ನನಗೆ ಯಾವುದೇ ಅಡಚಣೆ ಇಲ್ಲ. ನನ್ನ 40 ವರ್ಷಗಳ ಸುದೀರ್ಘ ರಾಜಕೀಯ ಅನುಭವದಿಂದ ಇಂತಹ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ನಾನು ಈಗಾಗಲೇ ಹಲವಾರು ಜನರನ್ನು ಶಾಸಕರನ್ನಾಗಿ ಹಾಗೂ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೇನೆ, ಹೀಗಾಗಿ ಈ ಕ್ಷೇತ್ರಕ್ಕೆ ಕೆಲಸ ತರುವ ಎಲ್ಲಾ ಅನುಭವ ನನಗಿದೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಪ್ರಮುಖ ಕಾಮಗಾರಿಯನ್ನು ಅನುಭವಿ ಗುತ್ತಿಗೆದಾರರಾದ ವಿಠ್ಠಲ ಸಿದ್ದಪ್ಪ ಕೋಳಿ ಅವರು ನಿರ್ವಹಿಸಲಿದ್ದಾರೆ.
