ಖಾನಾಪೂರ ತಾಲೂಕಿನ ಉಚವಡೆ-ತಿರ್ಥಕುಂಢೆ-ಜಾಂಬೋಟ್ಟಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಸಾರ್ವಜನಿಕರ ಸಂಚಾರ ನರಕಸದೃಶವಾಗಿದೆ. ಈ ದುಸ್ಥಿತಿಯನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ದೀಪಕ್ ಕವಟ್ಟನಕರ್ ಅವರು ಸ್ಥಳೀಯ ಶಾಸಕರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.


ಉಚವಡೆ, ತಿರ್ಥಕುಂಢೆ ಹಾಗೂ ಜಾಂಬೋಟ್ಟಿ ಭಾಗದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಿಲುಕಿಕೊಂಡಿರುವ ದ್ವಿಚಕ್ರ ವಾಹನಗಳನ್ನು ನಾಲ್ಕೈದು ಜನರು ಹೆಗಲ ಮೇಲೆ ಹೊತ್ತು ತರುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ದೀಪಕ್ ಕವಟ್ಟನಕರ್, “ಒಂದು ಲಕ್ಷ ಮತಗಳನ್ನು ನೀಡಿ ಗೆಲ್ಲಿಸಿದ ಜನರಿಗೆ ಶಾಸಕರು ನೀಡಿದ ಕೊಡುಗೆ ಏನು? ಮೂರು ವರ್ಷ ಕಳೆದರೂ ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕುವ ಯೋಗ್ಯತೆ ಇವರಿಗಿಲ್ಲವೇ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ನಡೆದುಕೊಂಡು ಹೋಗಲೂ ಸಾಧ್ಯವಾಗದ ಈ ಕೆಸರು ರಸ್ತೆಯ ವೀಡಿಯೋಗಳು ಟಿವಿಯಲ್ಲಿ ಪ್ರಸಾರವಾಗುತ್ತಿದ್ದರೂ ಶಾಸಕರು ಕಣ್ಣು ಮುಚ್ಚಿ ಕುಳಿತಿರುವುದಕ್ಕೆ ಗ್ರಾಮಸ್ಥರ ಸಮ್ಮುಖದಲ್ಲೇ ಶಾಸಕರ ವಿರುದ್ಧ ಪ್ರಶ್ನೆಗಳ ಸುರಿಮಳೆಗರೆದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
