Belagavi

ಬೆಳಗಾವಿಯ ಕಣಬರ್ಗಿಗೆ ಸಮರ್ಪಕ ಬಸ್ ಸೇವೆಗೆ ಆಗ್ರಹ: ಕೆಎಸ್‌ಆರ್‌ಟಿಸಿ ಡಿಸಿಗೆ ಮಾಜಿ ಮೇಯರ್ ನೇತೃತ್ವದಲ್ಲಿ ಮನವಿ!

Share

ಬೆಳಗಾವಿ ನಗರದ ಕಣಬರ್ಗಿ ಭಾಗದಲ್ಲಿ ದಿನೇ ದಿನೇ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಸಮರ್ಪಕ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಇಲ್ಲದೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇರುವ ಕೆಲವೇ ಬಸ್ಸುಗಳು ಸಹ ಸರಿಯಾದ ಸಮಯಕ್ಕೆ ಬಾರದೆ ಜನರು ಪರದಾಡುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಮಾಜಿ ಮೇಯರ್ ನೇತೃತ್ವದಲ್ಲಿ ಇಂದು ವಿಭಾಗೀಯ ನಿಯಂತ್ರಕರಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿಯ ಕಣಬರ್ಗಿ ಗ್ರಾಮಕ್ಕೆ ಬಸ್ ರೌಂಡ್‌ಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ಅನಾನುಕೂಲತೆಯನ್ನು ಖಂಡಿಸಿ ಮಾಜಿ ಮೇಯರ್ ಶಿವಾಜಿರಾವ್ ಸುಂಟಕರ್ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರನ್ನು (ಡಿಸಿ) ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಿಸಾನ್ ಸುಂಟಕರ್, ಅಡ್ವೋಕೇಟ್ ಶಿವಾಜಿ ಪಾಟೀಲ್, ಅಡ್ವೋಕೇಟ್ ಶ್ರೀನಿವಾಸ್ ಯೆಣಗಿ, ಪ್ರಭಾಕರ್ ಮನ್ನೋಲ್ಕರ್, ರಾಜು ದಸ್ಕ, ಸುರೇಶ್ ಗೋವೇಕರ್, ಸಿದ್ದರಾಯ್ ಘಂಟೇಕರ್, ಧಾಕಲು ಸುಂಟಕರ್, ಅಪ್ಪಾ ಚೌಗುಲೆ, ಬಾಲು ಮಲಾಯಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು ಗ್ರಾಮಸ್ಥರ ಪರವಾಗಿ ಧ್ವನಿ ಎತ್ತಿದರು. ಸಾರ್ವಜನಿಕರ ದೂರುಗಳನ್ನು ಆಲಿಸಿದ ವಿಭಾಗೀಯ ನಿಯಂತ್ರಕರು, ಈ ಹಿಂದೆ ಇದ್ದಂತೆಯೇ ಬೇಡಿಕೆಗೆ ತಕ್ಕಂತೆ ಬಸ್ ಸೌಲಭ್ಯವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಿಯಮಿತವಾಗಿ ಎರಡು ಬಸ್ಸುಗಳ (ಅಪ್ ಅಂಡ್ ಡೌನ್) ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಾಗಿ ಅಧಿಕಾರಿಗಳು ಇದೇ ವೇಳೆ ಸ್ಪಷ್ಟಪಡಿಸಿದರು.

Tags:

error: Content is protected !!