ಕೃಷಿಯಲ್ಲಿ ಮಣ್ಣು ಮತ್ತು ನೀರು ರೈತನ ಎರಡು ಕಣ್ಣುಗಳಿದ್ದಂತೆ. ಇವುಗಳ ಸಕಾಲಿಕ ಸಂರಕ್ಷಣೆ, ಸಾವಯವ ಗೊಬ್ಬರದ ಬಳಕೆ ಹಾಗೂ ಮಿತ ನೀರಿನ ನಿರ್ವಹಣೆಯಿಂದ ಅಧಿಕ ಕಬ್ಬು ಉತ್ಪಾದನೆ ಸಾಧ್ಯ ಎಂದು ಚಿಕ್ಕೋಡಿಯ ಉಪಕೃಷಿ ನಿರ್ದೇಶಕ ಸಹದೇವ ಎರಗೊಪ್ಪ ತಿಳಿಸಿದರು.

ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಜ್ಞಾನ ಕೇಂದ್ರದಲ್ಲಿ ಜವಾಹರ ಸಕ್ಕರೆ ಕಾರ್ಖಾನೆ ಹಾಗೂ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಕಬ್ಬು ಬೆಳೆ ವಿಚಾರ ಸಂಕಿರಣ’ದಲ್ಲಿ ಅವರು ಮಣ್ಣು ಮತ್ತು ಸಾವಯವ ಕೃಷಿ ಕುರಿತು ರೈತರಿಗೆ ಮಾರ್ಗದರ್ಶನ ನೀಡಿದರು.

ಬರಪರಿಸ್ಥಿತಿಯಲ್ಲಿ ಕಬ್ಬು ಬೆಳೆಯೋಜನೆ ಕುರಿತು ಮಾತನಾಡಿದ ನಿಪ್ಪಾಣಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯ ಶಾಸ್ತ್ರಜ್ಞ ಡಾ. ಎಸ್. ಬಿ. ಪಾಟೀಲ ರೈತರು ಪ್ರತಿ ಎಕರೆಗೆ 100 ಟನ್ಗೂ ಅಧಿಕ ಕಬ್ಬು ಬೆಳೆಯಲು ಸ್ವತಃ ತಳಿಗಳನ್ನು ತಯಾರಿಸಿಕೊಳ್ಳಬೇಕು. ನಿರಂತರ ಒಂದೇ ಬೆಳೆ ಬೆಳೆಯದೆ ಬೆಳೆ ಪರಿವರ್ತನೆ ಮಾಡಬೇಕು. ಕಬ್ಬಿನ ಸಾಲಿನಲ್ಲಿ ಗೊಬ್ಬರವು ಮಣ್ಣಿನ ಆಳಕ್ಕೆ ಸೇರುವಂತೆ ನೋಡಿಕೊಳ್ಳಬೇಕು ಹಾಗೂ ನೀರಿನ ಕೊರತೆ ನಿಭಾಯಿಸಲು ಸುಧಾರಿತ ತಳಿಗಳನ್ನು ನಾಟಿ ಮಾಡಬೇಕು” ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತುಕ್ಕಾನಟ್ಟಿಯ ಕೃಷಿ ಸಹಾಯಕ ದತ್ತಾ ಮೇತ್ರೆ, ಜವಾಹರ ಕಾರ್ಖಾನೆಯ ಉಪಾಧ್ಯಕ್ಷ ಬಾಬಾಸಾಹೇಬ್ ಚೌಗುಲೆ, ಪ್ರಮುಖರಾದ ದಾದಾಸಾಹೇಬ್ ಸಾಂಗಾವೆ, ಸುನಿಲ್ ನಾರೆ, ಶೀತಲ ಅಮ್ಮನವರ, ಸುನಿಲ್ ಪಾಟೀಲ್ ಹಾಗೂ ವ್ಯವಸ್ಥಾಪಕ ಕಿರಣ್ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಂಚಾಲಕ ಸುಮೇರು ಪಾಟೀಲ, ಶೇಖರ್ ಪಾಟೀಲ, ಕೃಷಿ ಅಧಿಕಾರಿಗಳಾದ ಎನ್. ಎ. ಜಾದವ, ಅನುರಾಧಾ ಹುಲಕುಂದ್, ಭಾಸ್ಕರ್ ಪಟ್ಟಣಕುಡೆ, ಅನಿಲ್ ಕುಮಾರ ಚೌಗಲೆ, ಅಜಿತ್ ಚೌಗುಲೆ ಸೇರಿದಂತೆ ಬೇಡಕಿಹಾಳ, ನೇಜ, ಸದಲಗಾ, ಶಮನೇವಾಡಿ, ಭೋಜ ಗ್ರಾಮಗಳ ನೂರಾರು ರೈತರು ಉಪಸ್ಥಿತರಿದ್ದರು.
