ಬೆಂಗಳೂರು ನಗರಾಭಿವೃದ್ಧಿ ಖಾತೆ ತಪ್ಪಿದಕ್ಕೆ ಅಸಮಾಧಾನಗೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರವನ್ನು ಸಿಎಂ ಡಿ.ಕೆ.ಶಿವಕುಮಾರ್ಗೆ ರವಾನಿಸಿದ್ದಾರೆ. ಆ ಮೂಲಕ ಸಿಎಂ ಡಿಕೆಶಿ ನೂತನ ಸರ್ಕಾರದಲ್ಲಿ ಬಿಕ್ಕಟ್ಟು ಉಂಟಾಗಿದೆ.

ಈ ಸಂಬಂಧ ತಮ್ಮ ಕೊರಮಂಗಲ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಈಗಿನ ಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಅವರು 2023ರಲ್ಲಿ ನಮ್ಮ ಮನೆಗೆ ಬಂದಿದ್ರು. ಮುಂದೆ ನಾನೇ ಸಿಎಂ ಆಗುತ್ತೇನೆ. ನಿಮಗೆ ಬೆಂಗಳೂರು ನಗರಾಭಿವೃದ್ಧಿ ಕೊಡ್ತೇನೆ ಎಂದಿದ್ರು. ಪ್ರಮಾಣ ವಚನಕ್ಕೂ ಮುನ್ನ ಅವರನ್ನು ಭೇಟಿಯಾದಾಗಲೂ ಕೂಡಾ ಬೆಂಗಳೂರು ನಗರಾಭಿವೃದ್ಧಿ ನಿಮಗೆ ಕೊಡ್ತೇನೆ ಅಂದಿದ್ರು. ಆದರೀಗ ಜಲಸಂಪನ್ಮೂಲ ಖಾತೆ ಕೊಟ್ಟಿದ್ದಾರೆ. ನಮ್ಮ ಆತ್ಮಸಾಕ್ಷಿಯಾಗಿ ಕೆಲಸ ಮಾಡಲು ಆಗಲ್ಲ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು.

ನಾನು 53 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಸಾಕಷ್ಟು ಅವಕಾಶ ನೀಡಿದೆ. 9 ಬಾರಿ ಶಾಸಕನಾಗಲು ಅವಕಾಶ ನೀಡಿದೆ. ವೀರಪ್ಪ ಮೊಯ್ಲಿ ಅವರೇ ಕರೆದು ನನಗೆ ಟಿಕೆಟ್ ನೀಡಿದ್ದರು. ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಧರಂಸಿಂಗ್, ಸಿದ್ದರಾಮಯ್ಯ ಸರ್ಕಾರಗಳಲ್ಲಿ ಸಚಿವನಾಗಿರುವೆ. ನಾನು ಯಾರಲ್ಲೂ ಸಚಿವ ಸ್ಥಾನ ಕೇಳಿರಲಿಲ್ಲ ಎಂದು ಹಳೆಯ ಘಟನೆಗಳನ್ನು ಸ್ಮರಿಸಿದರು.
2023ರಲ್ಲಿ ಸಿದ್ದರಾಮಯ್ಯ ಅವರು ಕಳೆದ ಬಾರಿ ಸಚಿವ ಸ್ಥಾನ ನೀಡಿದ್ದರು. ಆವತ್ತು ಬೈರತಿ ಸುರೇಶ್ ನನಗೆ ಕರೆ ಮಾಡಿ ಕರೆದು ಸಿದ್ದರಾಮಯ್ಯ ನಿಮ್ಮ ಜೊತೆ ಮಾತನಾಡಬೇಕು ಎಂದು ಕರೆಸಿ ಸಭೆ ಮಾಡಿದ್ದರು. ನಿಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡ್ತೇವೆ ಎಂದು ಹೇಳಿದ್ದರು. ನಾನೇನು ಆ ಖಾತೆಯನ್ನು ಆವತ್ತು ಕೇಳಿರಲಿಲ್ಲ. ಆದರೆ, ಬಳಿಕ ಖಾತೆ ಹಂಚಿಕೆ ವೇಳೆ ಸಾರಿಗೆ ಇಲಾಖೆ ಕೊಟ್ಟಿದ್ರು. ಆಗ ಮತ್ತೆ ಬೈರತಿ ಸುರೇಶ್ ಕರೆ ಮಾಡಿ ಸ್ವಲ್ಪ ಬದಲಾವಣೆ ಆಯಿತು ಎಂದಿದ್ರು ಎಂದು ವಿವರಿಸಿದ್ದಾರೆ. ನಾನು ಶಾಸಕನಾಗಿ ಮುಂದುವರೆಯುತ್ತೇನೆ. ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಕೈಯಲ್ಲಿ ಹೋಗಿ ರಾಜೀನಾಮೆ ಕೊಟ್ಟು ಬರಲು ನನಗೆ ಇಷ್ಟ ಇಲ್ಲ. ಸಿಎಂ ಕಾರ್ಯದರ್ಶಿ ತುಷಾರ್ ಗಿರಿನಾಥ್ಗೆ ನಮ್ಮ ಕಚೇರಿ ಸಿಬ್ಬಂದಿ ರಾಜೀನಾಮೆ ಪತ್ರ ಕೊಟ್ಟು ಬರುತ್ತಾರೆ. ನಾನು ಖಾತೆಗಾಗಿ ರಾಜೀನಾಮೆ ಕೊಡುತ್ತಿಲ್ಲ. ಯಾಕೆ ರಾಜೀನಾಮೆ ಕೊಡುತ್ತಿದ್ದೇನೆ ಅಂತಾ ಮಾಧ್ಯಮದ ಮುಂದೆ ಬಂದು ಹೇಳುತ್ತಿರುವೆ. ಎಸ್.ಎಂ ಕೃಷ್ಣ ಅವರು ತಮ್ಮ ಸಂಪುಟದಲ್ಲಿ ಒಂದೇ ವರ್ಷ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿದ್ದರು. ನಾನು ಎಲ್ಲಾ ಇಲಾಖೆಗಳಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ.
