• ವಿಜಯ ಜಯಭೇರಿಗೆ ಸಚಿವ ಎಂ.ಬಿ.ಪಾಟೀಲ ಮೆಚ್ಚುಗೆ
• ತಮಿಳುನಾಡಿನಲ್ಲಿ ಜಾತ್ಯತೀತ ಶಕ್ತಿಗಳ ಗೆಲುವಿಗೆ ಬೆಂಬಲ
• ಬಿಜೆಪಿ ವಿರುದ್ಧ ಸಚಿವರಿಂದ ಹರಿತವಾದ ವಾಗ್ದಾಳಿ
• ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗೆ ಪ್ರತಿಕ್ರಿಯೆ

ತಮಿಳುನಾಡು ಚುನಾವಣಾ ಫಲಿತಾಂಶದ ಬೆನ್ನಲ್ಲೇ ವಿಜಯಪುರದಲ್ಲಿ ಸಚಿವ ಎಂ.ಬಿ. ಪಾಟೀಲ ಮಹತ್ವದ ಹೇಳಿಕೆ ನೀಡಿದ್ದಾರೆ. ನಟ ವಿಜಯ ಅವರ ಜಾತ್ಯತೀತ ನಿಲುವನ್ನು ಬೆಂಬಲಿಸಿದ ಅವರು, ಬಿಜೆಪಿ ಎಂಬ ಕೋಮುವಾದಿ ಶಕ್ತಿಯನ್ನು ದೂರವಿಡಲು ಯುವ ನಾಯಕನಿಗೆ ಬೆಂಬಲ ನೀಡುವುದು ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.
ತಮಿಳುನಾಡಿನಲ್ಲಿ ನಟ ವಿಜಯ ಅವರ ಪಕ್ಷದ ಭರ್ಜರಿ ಪ್ರದರ್ಶನದ ಕುರಿತು ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ಜನರು ನೀಡಿರುವ ಸ್ಪಷ್ಟ ತೀರ್ಪಿಗೆ ಕಾಂಗ್ರೆಸ್ ತಲೆಬಾಗಲಿದೆ ಎಂದು ತಿಳಿಸಿದ್ದಾರೆ. “ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವುದು ನಮ್ಮ ಮೊದಲ ಆದ್ಯತೆ. ವಿಜಯ ಅವರು ಜಾತ್ಯತೀತ ತತ್ವದ ಮೇಲೆ ಗೆದ್ದು ಬಂದಿದ್ದಾರೆ, ಅವರಿಗೆ ಬೆಂಬಲ ನೀಡದಿದ್ದರೆ ಜನ ನಮ್ಮನ್ನು ತಪ್ಪಿತಸ್ಥರನ್ನಾಗಿ ಮಾಡುತ್ತಾರೆ. ನಾವು ಯಾರಿಗೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವುದಿಲ್ಲ, ಬದಲಾಗಿ ಜನರ ತೀರ್ಪನ್ನು ಗೌರವಿಸುತ್ತೇವೆ” ಎಂದು ವಿಜಯ ಅವರ ರಾಜಕೀಯ ಪ್ರವೇಶಕ್ಕೆ ಸಾಥ್ ನೀಡಿದರು.
ಇನ್ನು ಪಶ್ಚಿಮ ಬಂಗಾಳದ ರಾಜಕೀಯ ಅಸ್ಥಿರತೆ ಮತ್ತು ಮಮತಾ ಬ್ಯಾನರ್ಜಿ ಅವರ ರಾಜೀನಾಮೆ ವಿಚಾರವಾಗಿಯೂ ಮಾತನಾಡಿದ ಸಚಿವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇಡಿ, ಅಧಿಕಾರಿಗಳು ಮತ್ತು ಚುನಾವಣಾ ಆಯೋಗವನ್ನು ಬಳಸಿಕೊಂಡು ವಾಮಮಾರ್ಗದ ಮೂಲಕ ಗೆಲುವಿಗೆ ಪ್ರಯತ್ನಿಸಿದೆ ಎಂದು ಆರೋಪಿಸಿದರು. ಮಮತಾ ಬ್ಯಾನರ್ಜಿ ಅವರ ರಾಜೀನಾಮೆ ಕುರಿತು ಸಂವಿಧಾನ ತಜ್ಞರು ನಿರ್ಧರಿಸಲಿದ್ದಾರೆ ಎಂದ ಅವರು, ಬಿಜೆಪಿ ಶಾಸಕನ ಪಿಎ ಕೊಲೆ ಪ್ರಕರಣದ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

