ಉದ್ಯಮದಲ್ಲಿ ನಷ್ಟ ಹಿನ್ನೆಲೆ ವಿಷ ಸೇವಿಸಿ ಯುವಕ ಸೆಲ್ಸಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

ವಿನಾಯಕ ಮಹಾದೇವ ಭಂಢಾರೆ (ಯುವಕ) ಮನನೊಂದು ಈ ಕೃತ್ಯಕ್ಕೆ ಮುಂದಾಗಿದ್ದಾನೆ. “ನಾನು ಬದುಕುವುದಿಲ್ಲ, ಇಂದೇ ನನ್ನ ಕೊನೆಯ ದಿನ” ಎಂದು ಹೇಳಿರುವ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಉದ್ಯಮದಲ್ಲಿ ನಷ್ಟವಾಗಿದ್ದು, ಹೂಡಿಕೆ ಮಾಡಿದವರಿಂದ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಆರೋಪಿಸಿದ್ದಾನೆ. ವಿಡಿಯೋದಲ್ಲಿ ಮಂಜುನಾಥ ರಾಯಬಾಗಿ, ಪ್ರಕಾಶ್ ಪಾಟೀಲ್, ರಾಜಾರಾಮ ದೇಸಾಯಿ, ರಾಘವೇಂದ್ರ ರಾಯಬಾಗಿ ಹಾಗೂ ಖೀರಪ್ಪ ಶಾಪುರಕರ್ ಅವರ ಹೆಸರನ್ನು ಉಲ್ಲೇಖಿಸಿದ್ದಾನೆ.

“ನಾನು ಹಣ ತೆಗೆದುಕೊಂಡು ಹೋಗಿದ್ದೇನೆ ಎಂದು ನನ್ನ ಹೆಸರು ಹಾಳು ಮಾಡಿದ್ದಾರೆ” ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಸಾಯುವ ಮುನ್ನ ಸೆಲ್ಫಿ ವಿಡಿಯೋ ಹಾಗೂ ಪತ್ರ ಬರೆದು ಈ ಕೃತ್ಯಕ್ಕೆ ಮುಂದಾಗಿದ್ದಾನೆ.
ಘಟನೆಯ ನಂತರ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
