Vijaypura

ಜನಿವಾರ ತೆಗೆಸಿದ ಪ್ರಕರಣ; ಎಸ್ ಐ ಟಿ ರಚಿಸಲು ಆಗ್ರಹಿಸಿ ಪ್ರತಿಭಟನೆ

Share

ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಬೆಂಗಳೂರಿನ ಮಡಿವಾಳದ ಕೃಪಾನಿಧಿ. ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಿದ್ದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರವನ್ನು ಕಾಲೇಜಿನ ಆಡಳಿತ ಮಂಡಳಿ ತೆಗೆಸಿದ್ದನ್ನು ಖಂಡಿಸಿ ಈ ಪ್ರಕರಣವನ್ನು ಎಸ್.ಐ.ಟಿ. ತಂಡ ರಚಿಸಿ ತನಿಖೆ ನಡೆಸಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ವಿಜಯಪುರ ಜಿಲ್ಲಾ ಘಟಕದಿಂದ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮುಕುಂದ ಕುಲಕರ್ಣಿಮಾತನಾಡಿ, ಜನಿವಾರ ಧರಿಸುವುದು ಬ್ರಾಹ್ಮಣ ಸಮಾಜದ ಸಾಂಪ್ರದಾಯಿಕ ಗುರುತು. ಜನಿವಾರ ನಮ್ಮ ಸಮಾಜದ ಹೆಮ್ಮೆ. ನಮ್ಮ ಸಮಾಜದ ಗರ್ವದ ಪ್ರತೀಕವಾದ ಜನಿವಾರವನ್ನು ತೆಗೆಸಿದ್ದು ಆಘಾತಕಾರಿ. ಜನಿವಾರದಿಂದ ಯಾವರೀತಿಯಾಗಿ ಪರೀಕ್ಷೆಯಲ್ಲಿ ನಕಲು ಮಾಡಲು ಸಾಧ್ಯ? ಅನವಶ್ಯಕವಾಗಿ ವಿದ್ಯಾರ್ಥಿಯ ಜನಿವಾರ ತೆಗೆಸಿ ನಮ್ಮ ಸಮಾಜಕ್ಕೆ ಅಪಮಾನಿಸಿದ್ದು
ಖಂಡನಾರ್ಹ. ಕಳೆದ ವರ್ಷವೂ ಸಹಿತ ಇದೇ ರೀತಿಯಾಗಿ ನಡೆದ ಸಂದರ್ಭದಲ್ಲಿಯೂ ನಾವು ಹೋರಾಟ ಮಾಡಿದ್ದೆವು. ಆದರೆ ಪುನಃ ಮತ್ತೇ ಅದೇ ಘಟನೆ ನಡೆದದ್ದು ನಮ್ಮ ಸಮಾಜಕ್ಕೆ ಮಾಡಿದ
ಅಪಮಾನವಾಗಿದೆ ಎಂದರು. ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಕಣ್ವ ಮಠ
ವಿಜಯಪುರ ಶಾಖೆಯ ವಿಚಾರಣಕರ್ತರಾದ ರಾಘವೇಂದ್ರ ಆಲಗೂರ ಮಾತನಾಡಿ, ಕಳೆದ ವರ್ಷವೇ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರೂ ಮತ್ತೆ ಬ್ರಾಹ್ಮಣನ ಅಸ್ಮಿತೆಯಾದ ಜನಿವಾರನ್ನು
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯಿಂದ ತೆಗೆದಿದ್ದು ಖೇದಕರ. ಈ ಘಟನೆಯಲ್ಲಿ ಭಾಗಿಯಾದ
ಸಿಬ್ಬಂದಿಗಳನ್ನು ವಜಾ ಗೊಳಿಸಬೇಕು ಹಾಗೂ ಹಿರಿಯ ಅಧಿಕಾರಿಗಳನ್ನೊಳಗೊಂಡ ವಿಶೇಷ ಎಸ್.ಐ.ಟಿ.
ತಂಡ ರಚಿಸಿ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಗೆ ಒಳಪಡಿಸಬೇಕು. ಈ ರೀತಿ
ಮೇಲಿಂದ ಮೇಲೆ ನಮ್ಮ ಸಮುದಾಯಕ್ಕೆ ಅಪಮಾನಿಕಾರಿ ಕೃತ್ಯ ಮಾಡುವುದು ಸರಿಯಲ್ಲ.
ಇನ್ನುಮುಂದೆ ಈ ರೀತಿಯಾದ ಘಟನೆ ನಡೆಯದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಮುಂದೆ
ಮತ್ತೇ ಇದೇ ರೀತಿ ಘಟನೆ ನಡೆದ ಪಕ್ಷದಲ್ಲಿ ಬ್ರಾಹ್ಮಣ ಸಮುದಾಯ ರಾಜ್ಯಾದ್ಯಂತ ಉಗ್ರ
ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಪವನ ಕುಲಕರ್ಣಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಮೀರ್ ಕುಲಕರ್ಣಿ, ನಗರ ಅಧ್ಯಕ್ಷ ಪ್ರಶಾಂತ ದೇಶಪಾಂಡೆ, ಯುವ ಘಟಕ
ಜಿಲ್ಲಾಧ್ಯಕ್ಷ ರೋಹನ್ ಆಪ್ಟೆ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:

error: Content is protected !!