ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ದರ್ಗಾ ಜಮೀನಿನ ದಾಖಲೆ ತಿದ್ದುಪಡಿ ಖಂಡಿಸಿ ಬೃಹತ್ ಪ್ರತಿಭಟನೆ ನಡೆದಿದೆ. 8 ಗುಂಟೆ ಜಾಗವನ್ನು 5 ಗುಂಟೆ ಎಂದು ನಮೂದಿಸಿರುವುದರ ಹಿಂದೆ ಜಮೀನು ಕಬಳಿಸುವ ಹುನ್ನಾರವಿದೆ ಎಂದು ಆರೋಪಿಸಿರುವ ಮುಸ್ಲಿಂ ಸಮುದಾಯದ ಮುಖಂಡರು, ಕೂಡಲೇ ಈ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.


ಸವದತ್ತಿ ತಾಲೂಕಿನ ಯರಗಟ್ಟಿ ಪಟ್ಟಣದ ಬಾಬಾಬುಡನ್ ಶಾವಲಿ ದರ್ಗಾ ಟ್ರಸ್ಟ್ಗೆ ಸೇರಿದ ಜಮೀನಿನ ಸರ್ವೇ ನಂಬರ್ 7/1 ಮತ್ತು 7/2ರಲ್ಲಿ ಅಕ್ರಮವಾಗಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿ ತಹಶಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಮೂಲತಃ 08 ಗುಂಟೆ ಇರುವ ದರ್ಗಾ ಜಾಗವನ್ನು ಕೇವಲ 5 ಗುಂಟೆ ಎಂದು ದಾಖಲೆಗಳಲ್ಲಿ ಬದಲಾಯಿಸಲಾಗಿದೆ. ಇದು ದರ್ಗಾದ ಜಮೀನನ್ನು ಕಬಳಿಸುವ ವ್ಯವಸ್ಥಿತ ಪಿತೂರಿಯಾಗಿದ್ದು, ಸರ್ಕಾರಿ ದಾಖಲೆಗಳಲ್ಲಿನ ಈ ವ್ಯತ್ಯಾಸವನ್ನು ತಕ್ಷಣವೇ ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ದರ್ಗಾ ಟ್ರಸ್ಟ್ ಸದಸ್ಯರು, ತಹಶಿಲ್ದಾರರ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಿದ್ದುಪಡಿಯಾಗಿರುವ ಜಾಗದ ವಿಸ್ತೀರ್ಣವನ್ನು ಮೊದಲಿನ ಸ್ಥಿತಿಗೆ ತರಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ದರ್ಗಾ ಜಮೀನು ರಕ್ಷಣೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ ಸಮುದಾಯದ ನೂರಾರು ಜನರು ನ್ಯಾಯಕ್ಕಾಗಿ ಆಗ್ರಹಿಸಿದರು.
