ರಾಜ್ಯದ ಅತೀ ಹೆಚ್ಚು ಬಜೆಟ್ಗಳನ್ನು ಮಂಡಿಸಿದ ಕೀರ್ತಿ ಹೊಂದಿರುವ ಸಿಎಂ ಸಿದ್ದರಾಮಯ್ಯನವರು ಶುಕ್ರವಾರ 17ನೇ ಬಜೆಟ್ ಮಂಡಿಸಿದ್ದು, ಜಿಲ್ಲೆಗೆ 17ಕ್ಕೂ ಅಧಿಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದು, ಹಲವು ಕ್ಷೇತ್ರಗಳಲ್ಲಿ ವಿವಿಧ ಯೋಜನೆಗಳು ಘೋಷಣೆಯಾಗುವಂತೆ ನೋಡಿಕೊಂಡಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಬಜೆಟ್ ಕುರಿತು ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿದೆ.ಈ ಕುರಿತು ಇಲ್ಲಿದೆ ಡಿಟೇಲ್ಸ್ ..

ನಿನ್ನೆ ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಬಜೆಟ್ ನಲ್ಲಿ ಬಸವನಾಡು ವಿಜಯಪುರ ಜಿಲ್ಲೆಯ ಆಶಾಕಿರಣ ಯೋಜನೆಯಾದ ಕೃಷ್ಣಾಕೊಳ್ಳದ ಯುಕೆಪಿ 3ನೇ ಹಂತದ ಯೋಜನೆಗೆ ಬೇಕಾದ ಕ್ರಮ ಕೈಗೊಳ್ಳುವುದು ಹಾಗೂ ಜಿಲ್ಲೆಗೆ ಸರ್ಕಾರದಿಂದಲೇ ಮೆಡಿಕಲ್ ಕಾಲೇಜು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಇದರೊಟ್ಟಿಗೆ ವಿಮಾನ ನಿಲ್ದಾಣ, ಕಾಲೇಜು, ಕೋಲ್ಡ್ ಸ್ಟೋರೇಜ್, ರಸ್ತೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭರ್ಜರಿ ಘೋಷಣೆಗಳಾಗಿವೆ. ಇನ್ನೂ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗಾಗಿ ವಿಜಯಪುರ ಜಿಲ್ಲೆಯ ತೊರವಿಯಲ್ಲಿ ಒಟ್ಟು 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲಗೃಹವನ್ನು ₹31ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇನ್ನೂ ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಯಾದ ಯುಕೆಪಿ 3ನೇ ಹಂತದ ಯೋಜನೆಯಡಿ ಆಲಮಟ್ಟಿ ಅಣೆಕಟ್ಟನ್ನು 519.6 ಮೀ ದಿಂದ 524.256 ಮೀ. ಗೆ ಎತ್ತರಿಸುವ ಕಾಮಗಾರಿಯಿಂದ ಮುಳುಗಡೆಯಾಗುವ ಜಮೀನುಗಳು ಹಾಗೂ ನೀರಾವರಿ ಕಾಲುವೆ ಜಾಲಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಮುಳುಗಡೆಗೊಳ್ಳುವ ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ ₹30 ಲಕ್ಷ ಹಾಗೂ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ ₹40 ಲಕ್ಷ ನಿಗದಿಪಡಿಸಲಾಗಿದೆ. ಒಪ್ಪಂದದ ಐತೀರ್ಪುಗಳ ಮೂಲಕ ಜಮೀನನ್ನು ಸ್ವಾಧೀನಪಡಿಸುವ ಪ್ರಕ್ರಿಯೆಯನ್ನು ಪ್ರಸಕ್ತ ವರ್ಷದಲ್ಲಿ ಪ್ರಾರಂಭಿಸಲಾಗುವುದು. ವಿಜಯಪುರ ಜಿಲ್ಲೆಯ ಬಾಬಾನಗರದಲ್ಲಿ 0.67 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯವನ್ನು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗುವುದು ಎಂದಿದ್ದಾರೆ. ಇನ್ನೂ ವಿಜಯಪುರದ ಸೈನಿಕ ಶಾಲೆಯ ಹಾಸ್ಟೆಲ್ ಕಟ್ಟಡಗಳನ್ನು ಹಂತ ಹಂತವಾಗಿ ಪುನರ್ ನಿರ್ಮಿಸಲು ಪ್ರಸಕ್ತ ಸಾಲಿನಲ್ಲಿ ₹10 ಕೋಟಿಗಳನ್ನು ಒದಗಿಸಲಾಗುವುದು. ಚಡಚಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲಾಗುವುದು. ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ವಿಸ್ತೃತ ಯೋಜನಾ ವರದಿ ತಯಾರಿಸಲಾಗುವುದು ಎಂಬ ಭರವಸೆ ಈಡೇರಿಸಿದ್ದು ಪಿಪಿಪಿ ವಿರುದ್ಧ ಹೋರಾಟ ಮಾಡಿದ ಹೋರಾಟಗಾರರಲ್ಲಿ ತೀವ್ರ ಸಂತಸ ಮೂಡಿಸಿದೆ.
ಇನ್ನೂ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಜಿಲ್ಲೆಯಲ್ಲಿ ಸಿಬಿಎಸ್ಸಿ ಪಠ್ಯಕ್ರಮದ ಕ್ರೈಸ್ ವಸತಿ ಶಾಲೆಯನ್ನು ಪ್ರಾರಂಭಿಸಲಾಗುವುದು. ವಿಜಯಪುರ ಕಾರ್ಮಿಕ ರಾಜ್ಯ ವಿಮಾ (ಇಎಸ್ಐ) ಚಿಕಿತ್ಸಾಲಯವನ್ನು ಉನ್ನತೀಕರಿಸಲಾಗುವುದು. ವಿಜಯಪುರ ವಿಮಾನ ನಿಲ್ದಾಣದ ಆವರಣದಲ್ಲಿ ಕ್ರಮವಾಗಿ ಫ್ಲೈಟ್ ಟ್ರೈನಿಂಗ್ ಸ್ಕೂಲ್ ಹಾಗೂ ಮ್ಯಾನುಫ್ಯಾಕ್ಚರಿಂಗ್ / ಅಸೆಂಬ್ಲಿ ಆಫ್ ಏರಕ್ರಾಫ್ಟ್ ಚಟುವಟಿಕೆಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು. ಎಂಎಸ್ಎಂಇಗಳನ್ನು ಪ್ರೋತ್ಸಾಹಿಸಲು ಕೆಎಸ್ಎಸ್ಐಡಿಸಿ ಮೂಲಕ 2026-27ನೇ ಸಾಲಿನಲ್ಲಿ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವಸಾಹತನ್ನು ಹೊಸದಾಗಿ ಪ್ರಾರಂಭಿಸಲಾಗುವುದು.
-ವಿಜಯಪುರದಲ್ಲಿ 1,000 ಬಂದಿಗಳ ಸಾಮರ್ಥ್ಯದ ಜಿಲ್ಲಾ ಕೇಂದ್ರ ಕಾರಾಗೃಹವನ್ನು ನಿರ್ಮಾಣ ಮಾಡಲಾಗಿರುತ್ತದೆ. ವಿಜಯಪುರ ಜಿಲ್ಲೆಯ ಚಡಚಣ ಏತ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳಲಾಗುವುದು.
ಈಗಾಗಲೇ ಅನುಮೋದನೆ ನೀಡಲಾದ ಯೋಜನೆಗಳು: ವಿಜಯಪುರ ಜಿಲ್ಲೆ, ಬಬಲೇಶ್ವರ ತಾಲ್ಲೂಕಿನ ಹಲವು ಹಳ್ಳಗಳಿಗೆ ಸರಣಿ ಚೆಕ್ ಡ್ಯಾಂ ನಿರ್ಮಾಣ.
ವಿಜಯಪುರ ಜಿಲ್ಲೆ, ಮುದ್ದೇಬಿಹಾಳ ತಾಲ್ಲೂಕಿನ ಎರಡು ಹಳ್ಳಗಳಿಗೆ ಬಿ.ಸಿ.ಬಿ ನಿರ್ಮಾಣ. .ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಕೆಂಗನಾಳದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ .ವಿಜಯಪುರ ಜಿಲ್ಲೆ, ಇಂಡಿ ತಾಲ್ಲೂಕಿನ ಗೊಳಸಾರದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ.
-2026-27ನೇ ಸಾಲಿನನಲ್ಲಿ ಹಂತ-1ರಲ್ಲಿ ಇಂಡಿಯಲ್ಲಿ ಶ್ರಮಿಕ ವಸತಿ ಶಾಲೆ ಅನುಮೋದಿಸಲಾಗಿದೆ. -2026-27ನೇ ಸಾಲಿನಲ್ಲಿ ಹಂತ-2ರಲ್ಲಿ ಮುದ್ದೇಬಿಹಾಳ, ಬಸವನಬಾಗೇವಾಡಿ, ಬಬಲೇಶ್ವರ, ನಾಗಠಾಣ, ಸಿಂದಗಿಯಲ್ಲಿ ಶ್ರಮಿಕ ವಸತಿ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಿಸಲಾಗಿದೆ.
-ಲೋಕೋಪಯೋಗಿ ಇಲಾಖೆಯಿಂದ 2026-27ನೇ ಸಾಲಿನ ಚಡಚಣ-ಗಾಣಗಾಪುರ (ಝಳಕಿ, ಇಂಡಿ, ಅಫಜಲಪುರ ಮಾರ್ಗ)-115 ಕಿಮೀ ದಿಂಡವಾರ (ಎಸ್ಹೆಚ್-41) ನಾಲತವಾಡ (ಸೊಮನಾಳ, ಸಾಸನೂರ, ಮೂಖಿಹಾಳ, ಹುಲಗಬಾಳ ಮಾರ್ಗ)-95 ಕಿ.ಮೀ ರಸ್ತೆ ಕಾಮಗಾರಿಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಅನುಮೋದನೆ ಪಡೆದು ಟೆಂಡರ್ ಆಹ್ವಾನಿಸಲು ಕ್ರಮವಹಿಸಲಾಗುವುದು. -2026-27ನೇ ಸಾಲಿನಲ್ಲಿ ಹೊಸದಾಗಿ ವಿಜಯಪುರ ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ ಆರಂಭಿಸಲಾಗುವುದು ಎಂದಿದ್ದಾರೆ.
ಇನ್ನೂ ಜಿಲ್ಲೆಯ ರೈತರಿಗೆ, ಜನರಿಗೆ, ಯುವಕರಿಗೆ ಅನುಕೂಲ ಕಲ್ಪಿಸಬೇಕಿದ್ದ ಹಲವು ಯೋಜನಗೆಳು ಬಜೆಟ್ ಘೋಷಣೆಯಲ್ಲಿ ಬರಲೇ ಇಲ್ಲ. ಮುಖ್ಯವಾಗಿ ಘೋಷಣೆಯಾಗಬೇಕಿದ್ದ ಫುಡ್ಪಾರ್ಕ್, ವೈನಪಾರ್ಕ್, ಕೈಗಾರಿಕಾ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ, ತೋಟಗಾರಿಕಾ ಕಾಲೇಜು, ಮಹಿಳಾ ವಿವಿ ಉತ್ತೇಜನಕ್ಕೆ ವಿಶೇಷ ಅನುದಾನ ಸೇರಿದಂತೆ ಬಹುತೇಕ ಜಿಲ್ಲೆಯ ಜನರ ಬೇಡಿಕೆಗಳಿಗೆ ಮಣ್ಣನೆ ಸಿಗದಂತಾಗಿದೆ ಎಂದು ಆರೋಪ ಕೇಳಿ ಬಂದಿದೆ.
ವಿಜಯಪುರ ಜಿಲ್ಲೆಗೆ ಭರ್ಜರಿ ಕೊಡುಗೆ ಸಿಕ್ಕಿದೆಯಾದರೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ಸಿಗಬೇಕಾಗಿತ್ತು ಎನ್ನುವದು ಇಲ್ಲಿಯ ಜನತೆಯ ಒತ್ತಾಯವಾಗಿದೆ.
