ಸಕ್ಕರೆ ಉದ್ಯಮದಲ್ಲಿ ಹೆಸರಾಂತವಾಗಿರುವ ಉಗಾರದ ‘ದಿ ಉಗಾರ ಶುಗರ್ ವರ್ಕ್ಸ್’ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಜಿಮ್ಖಾನಾದ 84ನೇ ವಾರ್ಷಿಕ ಸಭೆಯು ಬುಧವಾರ ಸಂಜೆ ಉಗಾರದ ವಿಹಾರ ಸಭಾಭವನದಲ್ಲಿ ನಡೆಯಿತು.

ಶಿರಗಾಂವಕರ ಬಂಧುಗಳ ಆಶೀರ್ವಾದದಿಂದ ಕಾರ್ಮಿಕರಿಗಾಗಿ ಕಾರ್ಯನಿರ್ವಹಿಸುತ್ತಿರುವ ಜಿಮ್ಖಾನಾ ಸಂಸ್ಥೆಯ ಮೂಲಕ ವರ್ಷಪೂರ್ತಿ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಹಾಗೂ ವ್ಯಾಯಾಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಕ್ಕರೆ ಕಾರ್ಖಾನೆಯ ಜನರಲ್ ಮ್ಯಾನೇಜರ್ ಆರ್.ಎನ್. ಸಿದ್ಧಾಂತಿ ಮಾತನಾಡಿ, ಸಕ್ಕರೆ ಕಾರ್ಖಾನೆಯ ಬೆಳವಣಿಗೆಯಲ್ಲಿ ದಿವಂಗತ ರಾಜಾಭಾವು ಶಿರಗೌಂಕರ್ ಅವರ ಕೊಡುಗೆ ಮಹತ್ವದ್ದಾಗಿದೆ. ಅವರು ರೈತರು ಹಾಗೂ ಕಾರ್ಮಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಇತ್ತೀಚೆಗೆ ಅವರ ಅಗಲಿಕೆ ಕಾರ್ಮಿಕರಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಜಿಮ್ಖಾನಾ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆಗೊಳಿಸುವಂತೆ ಅವರು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ 2026-27ನೇ ಸಾಲಿನ ಜಿಮ್ಖಾನಾದ ವಿವಿಧ ಜವಾಬ್ದಾರಿಗಳಿಗಾಗಿ ಪದಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಆಯ್ಕೆ ನಡೆಯಿತು. ಜನರಲ್ ಸೆಕ್ರೆಟರಿಯಾಗಿ ಅಧಿಕಾರಿ ಎನ್.ಎನ್. ಪತಕಿ, ಜಾಯಿಂಟ್ ಜನರಲ್ ಸೆಕ್ರೆಟರಿಯಾಗಿ ಎಸ್.ವಿ. ಭಟ್, ಕಾರ್ಯಕಾರಿಣಿ ಸಹಕಾರಿಗಳಾಗಿ ಕೆ.ಬಿ. ಶಿವಗುಣಿಸಿ ಹಾಗೂ ಸಿ.ಎ. ಗಣೆಶವಾಡಿ ಅವರನ್ನು ಆಯ್ಕೆ ಮಾಡಿರುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.
ಕ್ರೀಡಾ ವಿಭಾಗಕ್ಕೆ ಬಿ.ಎ. ಮಗದುಮ್, ಗ್ರಂಥಾಲಯ ವಿಭಾಗಕ್ಕೆ ಆರ್.ವೈ. ಸಿರಗನವರ್, ಮೈನರ್ ಗೇಮ್ಸ್ಗೆ ಎಸ್.ಬಿ. ಪಾಗೆ, ದೇಸಿ ಆಟಗಳಿಗೆ ಜೆ.ಎ. ದೇವಮೋರೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪಿ.ಎ. ಪಾಟೀಲ್, ಆರ್.ಎ. ಹೌಟಿ ಹಾಗೂ ಪಿ.ಪಿ. ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಆರಂಭದಲ್ಲಿ ಸಕ್ಕರೆ ಕಾರ್ಖಾನೆಯ ಉದ್ಯಮಿ ದಿವಂಗತ ರಾಜಾಭಾವು ಶಿರಗಾಂವಕರ್ ಹಾಗೂ ಕಳೆದ ವರ್ಷ ನಿಧನರಾದ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಉಗಾರ ಜಿಮ್ಖಾನಾದ ಅಧ್ಯಕ್ಷರಾಗಿ ಸಕ್ಕರೆ ಕಾರ್ಖಾನೆಯ ಎಂ.ಡಿ. ಚಂದನ್ ಶಿರಗಾಂವಕರ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಯನ್ನು ಡಿ.ವಿ. ಪಾಟೀಲ್ ವಾಚಿಸಿದರು. ಪಿ.ಎ. ಆತರ್ಕರ್ ವಂದಿಸಿದರು. ಸಭೆಯಲ್ಲಿ ಕಾರ್ಮಿಕರಿಗಾಗಿ ಲಕ್ಕಿ ಡ್ರಾ ಮೂಲಕ ವಿವಿಧ ಆಯ್ಕೆಗಳನ್ನು ನಡೆಸಲಾಯಿತು.
