ಬೆಳಗಾವಿಯ ಆನಂದವಾಡಿಯ ವಿಠ್ಠಲ-ರುಕ್ಮಾಯಿ ದೇವಾಲಯದ ಎದುರು ಒಳಚರಂಡಿ ಬ್ಲಾಕ್ ಆಗಿ ಕೊಳಚೆ ನೀರು ನಿಂತು ಭಕ್ತರು ಪರದಾಡುವಂತಾಗಿತ್ತು. ಸಾರ್ವಜನಿಕರ ಈ ಸಮಸ್ಯೆಗೆ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ತಕ್ಷಣವೇ ಸ್ಪಂದಿಸಿ ಪರಿಹಾರ ಒದಗಿಸಿದ್ದಾರೆ.


ಬೆಳಗಾವಿಯ ಆನಂದವಾಡಿ ಮುಖ್ಯ ರಸ್ತೆಯ ವಿಠ್ಠಲ ರುಕ್ಮಾಯಿ ದೇವಾಲಯದ ಎದುರು ಅಂಡರ್ಗ್ರೌಂಡ್ ಡ್ರೈನೇಜ್ ಬ್ಲಾಕ್ನಿಂದಾಗಿ ಚರಂಡಿ ನೀರು ರಸ್ತೆಗೆ ಹರಿದು ದೇವಸ್ಥಾನದ ಮುಂಭಾಗ ಕಲುಷಿತ ನೀರು ನಿಂತಿತ್ತು. ಇದರಿಂದ ಭಕ್ತರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ತೀವ್ರ ಅನಾನುಕೂಲವಾಗಿತ್ತು. ಈ ಬಗ್ಗೆ ನಾಗರಿಕರು ನೀಡಿದ ದೂರಿನ ಮೇರೆಗೆ ಕೂಡಲೇ ಎಚ್ಚೆತ್ತ ಸ್ಥಳೀಯ ನಗರಸೇವಕ ನಿತೀನ್ ಜಾದವ್ ಅವರು ಸಂಬಂಧಿತ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣವೇ ಜೆಸಿಬಿ ಹಾಗೂ ಕಾರ್ಮಿಕರ ಸಹಾಯದಿಂದ ಬ್ಲಾಕ್ ತೆರವುಗೊಳಿಸಿ, ನಿಂತಿದ್ದ ಕೊಳಚೆ ನೀರನ್ನು ಹೊರಹಾಕುವ ಮೂಲಕ ಶಾಶ್ವತ ಹಾಗೂ ತುರ್ತು ಪರಿಹಾರ ಕಲ್ಪಿಸಲಾಯಿತು. ಇದರಿಂದ ದೇಗುಲಕ್ಕೆ ಬರುವ ಭಕ್ತರು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದು, ಶ್ರಮ ವಹಿಸಿದ ನಗರಸೇವಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

