ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಗುಜನಟ್ಟಿ ಗ್ರಾಮದ ಮೈತ ರಮೇಶ ಹಣಮಂತ ಬಂಟ್ರೋಳಿ ಕೊಲೆಯಾದ ವ್ಯಕ್ತಿ. ಕಲ್ಲೋಳಿ ಗ್ರಾಮದ ಬನಪ್ಪ ರಾಮಚಂದ್ರ ವಡೇರ ಕೊಲೆ ಆರೋಪಿ.ರಮೇಶ ಬಂಟ್ರೋಳಿ ಹಾಗೂ ಬನಪ್ಪ ವಡೇರನ ಪತ್ನಿ ಲಕ್ಷ್ಮೀ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಇಬ್ಬರು ಒಟ್ಟಿಗಿರುವ ಫೋಟೋವನ್ನು ರಮೇಶ ತನ್ನ ಮೊಬೈಲ್ನ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿದ್ದ ಎನ್ನಲಾಗಿದೆ. ಈ ಸ್ಟೇಟಸ್ ಗಮನಿಸಿದ ಬನಪ್ಪ ವಡೇರ ಆಕ್ರೋಶಗೊಂಡಿದ್ದಾನೆ.
ಕಳೆದ ಸೋಮವಾರ ಕಲ್ಲೋಳಿ ಗ್ರಾಮದ ಹದ್ದಿಯಲ್ಲಿರುವ ಜಮೀನಿನಲ್ಲಿ ರಮೇಶನ ಮೇಲೆ ಕುಡುಗೋಲಿನಿಂದ ದಾಳಿ ನಡೆಸಿದ ಬನಪ್ಪ, ಕುತ್ತಿಗೆ ಹಾಗೂ ತಲೆಗೆ ಕಡಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
